ಅರಂತೋಡು: ಅಂಗಡಿಮಜಲು – ರೆಂಜಾಳ ಸಂಪರ್ಕ ರಸ್ತೆಗೆ ಶಾಸಕರಿಂದ ಗುದ್ದಲಿಪೂಜೆ

0

ಅರಂತೋಡಿನಿಂದ ಅಂಗಡಿಮಜಲು ಬಾಜಿನಡ್ಕ ಮೂಲಕ ಮರ್ಕಂಜ ಗ್ರಾಮದ ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾ.8ರಂದು ಸಂಜೆ ಗುದ್ದಲಿಪೂಜೆ ನೆರವೇರಿಸಿದರು.

ಅರಂತೋಡು ಗ್ರಾಮದ ಅಂಗಡಿಮಜಲು ಬಾಜಿನಡ್ಕ ಮೂಲಕ ಮರ್ಕಂಜ ಗ್ರಾಮದ ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ದ್ವಿಚಕ್ರ ಸೇರಿದಂತೆ ಇತರೆ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಈ ಭಾಗದ ನಾಗರಿಕರು ಸೇರಿ ಕಳೆದ ಎರಡು ತಿಂಗಳ ಹಿಂದೆ ಚುನಾವಣಾ ಬಹಿಷ್ಕಾರದ ಬ್ಯಾ‌ನರನ್ನು ರಸ್ತೆಯ ಅಲ್ಲಲ್ಲಿ ಅಳವಡಿಸಿದ್ದರಲ್ಲದೇ, ಮಾ.7ರಂದು ನಡೆದ ಅರಂತೋಡು ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಗ್ರಾಮಸಭೆಯಾಗಿ ಮರುದಿನವೇ ಗುದ್ದಲಿಪೂಜೆ ನಡೆದಿದ್ದು, ರಸ್ತೆ ಕಾಮಗಾರಿ ಯಾವಾಗ ಪ್ರಾರಂಭಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಈ ಸಂದರ್ಭದಲ್ಲಿ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು , ಪ್ರಧಾನ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಗ್ರಾ.ಪಂ. ಸದಸ್ಯರಾದ ಶಿವಾನಂದ ಕುಕ್ಕುಂಬಳ, ಶ್ರೀಮತಿ ಮಾಲಿನಿ ಉಳುವಾರು, ಗಂಗಾಧರ ಬನ, ಮಾಜಿ ಅಧ್ಯಕ್ಷರಾದ ಶ್ರೀಮತಿ ಹರಿಣಿ ದೇರಾಜೆ, ಮನ್ಸ ಮುಗೇರ, ಸ್ಥಳೀಯರಾದ ಶಂಕರಲಿಂಗ, ಸದಾನಂದ ಮೇರ್ಕಜೆ, ಹಂಸ ಕುಕ್ಕುಂಬಳ, ಯತೀಂದ್ರ ಕಿರ್ಲಾಯ, ನಿವೃತ್ತ ಶಿಕ್ಷಕ ತೀರ್ಥರಾಮ ಅಡ್ಕಬಳೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.