ಚಾರಿತ್ರಿಕ ಪರಂಪರೆಗಳ ಜ್ಞಾನಾಧಾರಿತ – ಸಂರಕ್ಷಣೆಗಾಗಿ “ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಕಾರ್ಯಾರಂಭ

0

ಸುಳ್ಯ: ಸುಳ್ಯದ ಯುವ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಇವರ ಸಾರಥ್ಯದಲ್ಲಿ, ಹಿರಿಯರ ಮಾರ್ಗದರ್ಶನದೊಂದಿಗೆ, ಕನಸಿನ ಯೋಜನೆ “ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ (ರಿ.) ಅಧಿಕೃತವಾಗಿ ನೋಂದಣಿಯಾಗಿ, ಫೌಂಡೇಶನ್ ನ ಟ್ರಸ್ಟಿಗಳಿಂದ ಸುಳ್ಯ ನ. ಪಂ. ಆವರಣದ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವಾರ್ಪಣೆ ಸಲ್ಲಿಸಿ ಕಾರ್ಯಾರಂಭಕ್ಕೆ ಶುಭಮುನ್ನುಡಿ ಬರೆಯಲಾಯಿತು.

ಈ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಕಾರ್ಯನಿರ್ವಹಿಸುವ, ಲೇಖಕ ಅನಿಂದಿತ್ ಗೌಡ ಅವರು ತಮ್ಮ ಕನಸಿನ ಒಂದು ದಿಟ್ಟ ಹೆಜ್ಜೆ ನನಸುoಟಾಗಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. “ನಾಲ್ಕು ವರ್ಷಗಳ ಕಾಲ ‘ರಿಕಾಲಿಂಗ್ ಅಮರ ಸುಳ್ಯ’ ಪುಸ್ತಕ ರಚನೆಯ ಸಂದರ್ಭದಲ್ಲಿ 1837ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕೆಲವು ಐತಿಹಾಸಿಕ ದಾಖಲೆಗಳು ಮತ್ತು ಅದಕ್ಕೂ ಮುಂಚಿನ ನಮ್ಮ ಸುಳ್ಯದ ಮಣ್ಣಿನ ಚರಿತ್ರೆಯ ವರ್ಣನೆಯ ಮಾಹಿತಿಗಳು ದೊರೆತವು. ವಸಾಹತುಶಾಹಿ ಆಳ್ವಿಕೆಯ ಕರಾಳತನ ಹಾಗೂ ಕ್ರೌರ್ಯವನ್ನು ಕಂಡು ಬೆಚ್ಚಿತನಾದೆ. ನಾವು ನಿಂತು ನಡೆದಾಡಲು ಕಲಿತ ಭೂಮಿಯೇ, ಹಿಂದೆ ಮಹತ್ವದ ಚರಿತ್ರೆಗೆ ಅಡಿಪಾಯವಾಗಿತ್ತು ಎಂದು ಅರಿತುಕೊಂಡಾಗ, ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು, ದೂರದ ದೇಶದ ಮ್ಯೂಸಿಯಂಗಳಲ್ಲಿ ಧೂಳು ಉಂಡು, ನಮ್ಮ ಮಣ್ಣಿನ ಇತಿಹಾಸದ ನೆನಪು ಯಾವುದೇ ಉದ್ದೇಶವನ್ನು ಪೂರೈಸದೆ ಇರುವಂತೆ ಬಿಡಬಾರದು ಎಂಬ ಪ್ರಾರಂಬದ ಅನಿಸಿಕೆಗಳು ಮುಂದಕ್ಕೆ ಕೊಂಡೋಯಿತು” ಎಂದು ಅವರು ಹಂಚಿಕೊಂಡರು.

“ಜ್ಞಾನಾಧಾರಿತ” ಪರಂಪರೆ – ಸಂರಕ್ಷಣೆಗೆ ಪ್ರಾಶಸ್ತ್ಯ ಶಿಕ್ಷಿತ ಯುವಕರು ಒಂದು ಊರಿನ ಇತಿಹಾಸ – ಪರಂಪರೆಯ ಜವಾಬ್ದಾರಿಯುತ ರಾಯಭಾರಿಗಳಾಗಬೇಕು ಎಂಬುದು ಲೇಖಕ ಅನಿಂದಿತ್ ಗೌಡ ಅವರ ದೃಢ ನಿಲುವು.

ಅಂತರಾಷ್ಟ್ರೀಯ ವಿದ್ವಾಂಸರೊಂದಿಗಿನ ಸಂವಾದದಿಂದ ಪಡೆದ ಪ್ರೇರಣೆಯಿಂದಾಗಿ ಸಂಸ್ಥೆಯ ರಚನೆಯ ಕುರಿತು ಮಾಹಿತಿ ನೀಡಿದ ಲೇಖಕ ಅನಿಂದಿತ್ ಗೌಡ ಅವರು, “ಪರಂಪರೆ – ಸಂರಕ್ಷಣೆ [Heritage Conservation] ಎಂಬ ವಿಷಯದ ಬಗ್ಗೆ ಮೊದಲು ಅರಿತುಕೊಂಡದ್ದಾಗಿ ತಿಳಿಸಿದರು.

“ಜ್ಞಾನಾಧಾರಿತ” ಸಂರಕ್ಷಣೆಯ (Knowledge – Based) ಮೂಲಕ ಐತಿಹಾಸಿಕ ಸಂಪತ್ತನ್ನು ಉಳಿಸುವ ಪ್ರಯತ್ನ ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಟ್ರಸ್ಟಿಗಳಾಗಿ ಲೇಖಕ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಕೃಷ್ಣ ಪ್ರಸಾದ್ ಮಡ್ತಿಲ ನ. ಸೀತಾರಾಮ ಸುಧಾಕರ ಕೊಚ್ಚಿ ಅಡ್ವೊಕೇಟ್, ಅಕ್ಷಯ್ ಆಳ್ವ , ಸುಳ್ಯದ ಐವರ್ನಾಡಿನಲ್ಲಿ ದಲಿಯ ಆರಾಧನೆ ಕುರಿತು ದಾಖಲೀಕರಣದ ಮುಂದಾಳತ್ವ ವಹಿಸಿಕೊಂಡ ಜಯರಾಜ್ ಗೌಡ ನಿಡುಬೆ, ಜಾಲ್ಸೂರು ಗ್ರಾಮದ ಬಾಲಸುಬ್ರಹ್ಮಣ್ಯ ಬೈತಡ್ಕ ಜೊತೆಗಿದ್ದರು.

ಭವಿಷ್ಯದ ಚಟುವಟಿಕೆಗಳ ಕುರಿತು ಮಾಹಿತಿಗಾಗಿ www.amarasulya.in ವೆಬ್ಸೈಟ್ ಗೆ ಭೇಟಿ ನೀಡಬಹುದೆಂದು ಲೇಖಕರು ತಿಳಿಸಿದ್ದಾರೆ.