ಶಿಕ್ಷಕರ ದಿನಾಚರಣೆ – ಬೆಂಗಳೂರಿನಲ್ಲಿ ಸಜ್ಜನ ಪ್ರತಿಷ್ಠಾನ ವತಿಯಿಂದ ಗುರುವಂದನಾ ಕಾರ್ಯಕ್ರಮ

0

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ಪೂವಪ್ಪ ಕಣಿಯೂರು ರವರಿಗೆ ಗುರು ವಂದನಾ
ಕಾರ್ಯಕ್ರಮ ಸೆ. 06ರಂದು ನಡೆಯಿತು. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಹೋಟೆಲ್ ಪಾರ್ಚೂನ್ ಟ್ರಿನಿಟಿಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಫಾರ್ಮೆಡ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ, ತರಬೇತಿ ಹಾಗೂ ಆಡಳಿತ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ತಮ್ಮ ಗುರುಗಳನ್ನು ಸಭೆಗೆ ಪರಿಚಯಿಸಿದರು.

ಅವರು ಗುರುಗಳಾದ ಡಾ. ಪೂವಪ್ಪ ಕಣಿಯೂರು ಬಗ್ಗೆ ಮಾತಾಡುತ್ತಾ ಪೂವಪ್ಪ ಕಣಿಯೂರುವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ, ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದವರು. ಅವರು ಅಧ್ಯಾಪನ ವೃತ್ತಿಯ ಜೊತೆಗೆ ಅಧ್ಯಯನ ಪ್ರವೃತಿಯನ್ನು ಮೈಗೂಡಿಸಿ ಕೊಂಡವರು. ಸಂಶೋಧಕರಾಗಿ ಜಾನಪದ, ಪ್ರಾದೇಶಿಕ ಅಧ್ಯಯನ ಕೃತಿಗಳ ಕರ್ತೃ ಗಳಾಗಿ, ಸಾಹಿತ್ಯ ವಿಮರ್ಶಾ ಲೇಖಕರಾಗಿ ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆ. ಚಿಂತಕರಾಗಿ ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಹೊಳಹುಗಳನ್ನು ನೀಡುತ್ತಾ ಬಂದಿದ್ದಾರೆ. ಬಹುಮುಖಿ ಆಸಕ್ತಿಯ ಡಾ. ಪೂವಪ್ಪ ಕಣಿಯೂರುರವರು ಅಪೂರ್ವ ವ್ಯಕ್ತಿತ್ವವುಳ್ಳವರಾಗಿ ನನ್ನಂಥ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ನೆಲೆಯಲ್ಲಿ ಪ್ರೇರಣೆಯಾದ ಗುರುಗಳು. ಡಾ. ಪೂವಪ್ಪ ಕಣಿಯೂರುರವರು ಕೇವಲ ಪರಿಣಾಮಕಾರಿಯಾದ ಉಪನ್ಯಾಸ ಮಾತ್ರವಲ್ಲದೆ, ಕಾಲೇಜಿನ ಎನ್.ಎಸ್.ಎಸ್ ಘಟಕ ಅಧಿಕಾರಿಗಳಾಗಿದ್ದು, ಅನೇಕ ಯುವ ಪ್ರತಿಭೆಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದಾರೆ.

ಇಂದು ಅವರಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಪಾರ ಶಿಷ್ಯರಿದ್ದಾರೆ. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಪರಿಚಯ ಮಾತುಗಳನ್ನಾಡಿದ ಡಾ. ಉಮ್ಮರ್ ಬೀಜದಕಟ್ಟೆಯವರು ತಮ್ಮ ಕಾಲೇಜು ದಿನದ ಅನುಭವಗಳ ಹಿನ್ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಇಸಾಕ್ ಮತ್ತು ರವಿಕುಮಾರ್ ರವರು ಡಾ. ಪೂವಪ್ಪ ಕಣಿಯೂರು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸರೋಜ ಅವರಿಗೆ ಅವರ ಕಿರಿಯ ಮಗ ವಿದ್ವತ್ ಕಣಿಯೂರು ಒಳಗೂಂಡಂತೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮವನ್ನು ಮಂಜುನಾಥ ಹಿರಿಯೂರು ಮತ್ತು ಪ್ರಕಾಶ್ ರವರು ಸಂಯೋಜಿಸಿದರು. ಅರವಿಂದ್ ಸ್ವಾಗತಿಸಿ, ರವಿಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ, ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಆರಿಸ್ ಪೇರಡ್ಕ, ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳಾದ ಕೃಷ್ಣಮೂರ್ತಿ, ಕಾರ್ತಿಕ್, ಚೆಲುವರಾಜು, ಶಂಕರ್ ದಿಸಾಲೆ, ಪವನ್ ಕುಮಾರ್, ರಾಧಾಕೃಷ್ಣ, ಶ್ರೀನಿವಾಸ್, ರಕ್ಷಿತ್, ಉನ್ನಿಸ್ ಗೂನಡ್ಕ, ಯತೀಶ್ ಟಿ.ಡಿ ಮತ್ತಿತರರು ಪಾಲ್ಗೊಂಡಿದ್ದರು.