ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆಯನ್ನು ಖಂಡಿಸಿ ಪುತ್ತೂರಿನಲ್ಲಿ ಹಿಂಜಾವೇ ಪ್ರತಿಭಟನೆ | ದೊಂದಿಯೊಂದಿಗೆ ರಸ್ತೆಗೆ ಅಡ್ಡವಾಗಿ ಕುಳಿತು ಆಕ್ರೋಶ

0
  • ಸರಕಾರಗಳು ನಮ್ಮ ನೋವಿಗೆ ಸ್ಪಂದಿಸಬೇಕು -ಶ್ರೀಕೃಷ್ಣ ಉಪಾಧ್ಯಾಯ
  • ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು -ಪಿ.ಜಿ.ಜಗನ್ನಿವಾಸ ರಾವ್
  • ರಾಜಸ್ಥಾನವನ್ನು ರಾಷ್ಟ್ರಪತಿ ಆಡಳಿತಕ್ಕೊಳಪಡಿಸಬೇಕು -ಅರುಣ್ ಕುಮಾರ್ ಪುತ್ತಿಲ
  • ತಾಕತ್ತಿದ್ದರೆ ನಮ್ಮನ್ನು ಹತ್ಯೆ ಮಾಡಲು ಬರಲಿ -ನರಸಿಂಹ ಮಾಣಿ

ಪುತ್ತೂರು: ನೂಪುರ್ ಶರ್ಮಾ ಬೆಂಬಲಿಗ ರಾಜಸ್ಥಾನದ ಟೈಲರ್ ಕನ್ನಯ್ಯಾ ಲಾಲ್ ಅವರ ಹತ್ಯೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು,ರಾಜಸ್ಥಾನ ಸರಕಾರವನ್ನು ರಾಷ್ಟ್ರಪತಿ ಆಡಳಿತಕ್ಕೊಳಪಡಿಸಬೇಕು.ಕೊಲೆಗೀಡಾದ ಕನ್ನಯ್ಯಾ ಲಾಲ್ ಅವರ ಕುಟುಂಬಕ್ಕೆ ರೂ.೧ ಕೋಟಿ ಪರಿಹಾರವನ್ನು ಸರಕಾರ ಕೊಡಬೇಕು, ಮತಾಂಧ ಸಂಘಟನೆಗಳನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣ ವೇದಿಕೆಯಿಂದ ಜೂ.೨೯ರಂದು ಮುಸ್ಸಂಜೆ ಪುತ್ತೂರು ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರು ದೊಂದಿ ಹಿಡಿದು ರಸ್ತೆಗೆ ಅಡ್ಡವಾಗಿ ಕೂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಗಳು ನಮ್ಮ ನೋವಿಗೆ ಸ್ಪಂದಿಸಬೇಕು: ಚಿಂತಕ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಅವರು ಪ್ರಮುಖ ಭಾಷಣ ಮಾಡಿದರು.ಕೋಮು ದ್ವೇಷದ ದಳ್ಳುರಿಗೆ ಹಿಂದು ಸಮಾಜ ಮಾತ್ರವಲ್ಲ ಅಪ್ಘಾನಿಸ್ಥಾನದಿಂದ ಹಿಡಿದು ಕೆಲವೊಂದು ದೇಶಗಳೇ ಸರ್ವನಾಶವಾಗುತ್ತಿವೆ.ಇಂತಹ ಘಟನೆಗಳಿಗೆ ಈಗಲೇ ಉತ್ತರ ಕೊಡುವಂತೆ ನಾವು ಹಿಂದುಗಳು ಸಿದ್ದರಾಗಬೇಕು ಎಂದರು.ಇದೊಂದು ಧರ್ಮ ಸಂಘರ್ಷವಲ್ಲ.ಧರ್ಮ ಮತ್ತು ಮತೀಯವಾದ ನಡುವಿನ ಯುದ್ದವಾಗಿದೆ.ಲೋಕೋ ಸಮಸ್ತ ಸುಖಿನೋ ಭವಂತು ಎಂಬ ಪ್ರಾರ್ಥನೆ ಮಾಡಿಕೊಂಡು ಬಂದಿರುವ ಹಿಂದು ಧರ್ಮ ಇನ್ನೊಬ್ಬರಿಗೆ ಕೇಡು ಬಯಸುವುದಿಲ್ಲ.ಆದರೆ ನಾವು ಸ್ನೇಹಕ್ಕೂ ಸಿದ್ಧ ಸಮರಕ್ಕೂ ಸಿದ್ಧ.ಹಿಂದು ಧರ್ಮದ ಮೇಲೆ ವಿಪರೀತ ಅಭಿಮಾನ ಬಂದವನು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸನಾಗುತ್ತಾನೆ.ಆದರೆ ಇಸ್ಲಾಮಿನ ಮೇಲೆ ವಿಪರೀತ ಪ್ರೀತಿ ಬಂದರೆ ಒಸಮಾ ಬಿನ್ ಲಾಡೆನ್ ಆಗುತ್ತಾನೆ.ಹಾಗಾಗಿ ಸರಕಾರಗಳು ನಮ್ಮ ನೋವಿಗೆ ತಕ್ಷಣ ಸ್ಪಂದಿಸಬೇಕು.ನಮಗೆ ನ್ಯಾಯಬೇಕು ಎಂದವರು ಹೇಳಿದರು.
ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು: ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ರಾಜಸ್ಥಾನದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಗೋಸ್ ಮಹಮ್ಮದ್ ಮತ್ತು ರಿಯಾಜ್ ಎಂಬವರು ಟೈಲರ್ ಕನ್ನಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿದ್ದು ಮತಾಂಧ ಶಕ್ತಿಗಳ ಈ ಕೃತ್ಯವನ್ನು ಬಿಜೆಪಿ ಕಟುವಾಗಿ ಖಂಡಿಸುತ್ತದೆ.ಅಪರಾಧಿಗಳಿಗೆ ತಕ್ಷಣ ಮರಣದಂಡನೆ ಶಿಕ್ಷೆ ಆಗಬೇಕು ಎಂದರಲ್ಲದೆ, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ.ಅದರ ಅಂತ್ಯವನ್ನು ಬಿಜೆಪಿ ಮಾಡಲಿದೆ ಎಂದರು.
ರಾಜಸ್ಥಾನ ಸರಕಾರವನ್ನು ರಾಷ್ಟ್ರಪತಿ ಆಡಳಿತಕ್ಕೊಳಪಡಿಸಬೇಕು: ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ನೂಪೂರ್ ಶರ್ಮಾ ಅವರು ಕುರಾನ್‌ನಲ್ಲಿರುವ ಹೇಳಿಕೆಯನ್ನೇ ಕೊಟ್ಟಿದ್ದಾರೆ ಹೊರತು ಯಾವುದೇ ಹೊಸ ಶಬ್ದವನ್ನು ಜೋಡಿಸುವ ಕೆಲಸ ಮಾಡಿಲ್ಲ.ಈ ನಿಟ್ಟಿನಲ್ಲಿ ನೂಪೂರ್ ಶರ್ಮರನ್ನು ಬೆಂಬಲಿಸುವ ಸಂದೇಶವನ್ನು ಅವತ್ತಿನಿಂದ ಇವತ್ತಿನ ತನಕ ಹಿಂದು ಸಮಾಜ ಮಾಡಿದೆ.ರಾಜಸ್ಥಾನದಲ್ಲಿ ನೂಪೂರ್ ಶರ್ಮ ಅವರನ್ನು ಬೆಂಬಲಿಸಿದ್ದ ಟೈಲರ್ ಕನ್ನಯ್ಯಾ ಲಾಲ್ ಅವರಿಗೆ ಬೆದರಿಕೆ ಇದೆ ಎಂದು ದೂರು ನೀಡಿದರೂ ಅಲ್ಲಿನ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.ಆದ್ದರಿಂದ ಅವರ ಕೊಲೆಗೆ ಕಾಂಗ್ರೆಸ್ ಸರಕಾರ ನೇರ ಹೊಣೆಯಾಗಿದೆ.ಹಾಗಾಗಿ ರಾಜಸ್ಥಾನ ಸರಕಾರವನ್ನು ರಾಷ್ಟ್ರಪತಿ ಆಳ್ವಿಕೆಗೊಳಪಡಿಬೇಕು ಮತ್ತು ಕನ್ನಯ್ಯಾ ಲಾಲ್ ಕುಟುಂಬಕ್ಕೆ ರೂ.೧ ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಮುಂದಿನ ದಿನ ಹಿಂದು ಸಮಾಜ ಜಾಗೃತಿಯಲ್ಲಿ ಇರಬೇಕಾದ್ದು ಅನಿವಾರ್ಯವಾಗಿದೆ.ಇಂತಹ ಘಟನೆಗಳಿಗೆ ಪ್ರೇರಣೆ ಕೊಡುವ ಮತೀಯ ಸಂಘಟನೆಗಳನ್ನು ಬಹಿಷ್ಕರಿಸಬೇಕೆಂದು ಅವರು ಆಗ್ರಹಿಸಿದರು.
ತಾಕತ್ತಿದ್ದರೆ ನಮ್ಮನ್ನು ಹತ್ಯೆ ಮಾಡಲು ಬರಲಿ: ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಹಸಂಯೋಜಕ ನರಸಿಂಹ ಮಾಣಿ ಅವರು ಮಾತನಾಡಿ ದೇಶದ ಬಗ್ಗೆ ಧ್ವನಿ ಎತ್ತದಂತೆ ಹಿಂದುಗಳನ್ನು ದಮನಿಸುವ ಕೆಲಸ ಆಗುತ್ತಿದೆ.ಆದರೆ ನಾವೆಲ್ಲ ನೂಪುರ್ ಶರ್ಮರ ಪರ ಘೋಷಣೆ ಕೂಗುತ್ತೇವೆ.ತಾಕತ್ತಿದ್ದರೆ ನಮ್ಮನ್ನು ಹತ್ಯೆ ಮಾಡಲು ಬರಲಿ ಎಂದು ಸವಾಲು ಹಾಕಿದರು.ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿಂದು ಜಾಗರಣ ವೇದಿಕೆ ಪ್ರಾಂತ ಯುವವಾಹಿನಿ ಸಂಯೋಜಕ ನ್ಯಾಯವಾದಿ ಚಿನ್ಮಯ್ ರೈ ಈಶ್ವರಮಂಗಲ, ವಿಭಾಗ ಸಂಯೋಜಕ ಅಜಿತ್ ಹೊಸಮನೆ, ಜಿಲ್ಲಾ ಸಂಪರ್ಕ ಪ್ರಮುಖ್ ರಾಜೇಶ್ ಪಂಚೋಡಿ, ವೆಂಕಟ್ ಕಡಬ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕೃಷ್ಣಪ್ರಸಾದ್ ಶೆಟ್ಟಿ, ಕೆದಂಬಾಡಿ ಗ್ರಾ.ಪಂ.ಅಧ್ಯಕ್ಷ ರತನ್ ರೈ ಕುಂಬ್ರ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಹರೀಶ್ ಆಚಾರ್ಯ, ಹರಿಣಿ ಪುತ್ತೂರಾಯ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಹರಿಪ್ರಸಾದ್ ಶೆಟ್ಟಿ, ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ದಿನೇಶ್ ಪಂಜಿಗ, ಪ್ರಾಂತ ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ತಾಲೂಕು ಅಧ್ಯಕ್ಷ ದಿನೇಶ್ ಪಂಜಿಗ, ತಾಲೂಕು ಯುವವಾಹಿನಿ ಸಂಯೋಜಕ ಗಿತೇಶ್, ಮನೀಶ್ ಕುಲಾಲ್, ಮನೀಶ್ ಬಿರ್ವ, ವಿಶ್ವ ಹಿಂದೂ ಪರಿಷತ್‌ನ ಮುಖಂಡರಾದ ಶ್ರೀಧರ್ ತೆಂಕಿಲ, ಪ್ರಸಾದ್ ಬೆಟ್ಟ, ವಿಶ್ವನಾಥ ಗೌಡ ಬನ್ನೂರು ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.