ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ : ಅರಂತೋಡು ಗ್ರಾ.ಪಂ.ನಲ್ಲಿ ಪೂರ್ವಭಾವಿ ಸಭೆ

0

 

ಸ್ವತಂತ್ರ ಭಾರತವು ಎಪ್ಪತ್ತೈದನೇ ವರ್ಷವನ್ನು ಪೂರ್ಣಗೊಳಿಸಿ ಎಪ್ಪತ್ತಾರನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಭಾರತದ ಅಮೃತ ಮಹೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆ.15ರಂದು ನಡೆಸುವ ಸಲುವಾಗಿ ಸಮಾಲೋಚನಾ ಸಭೆಯು ಜು.26ರಂದು ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

 


ಸಭೆಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಹರಿಣಿ ಡಿ. ದೇರಾಜೆ , ಉಪಾಧ್ಯಕ್ಷೆ ಕು ಶ್ವೇತಾ, ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯರಾದ ಶಿವಾನಂದ ಕುಕ್ಕುಂಬಳ, ವೆಂಕಟ್ರಮಣ ಪೆತ್ತಾಜೆ ,ರವಿ ಪೂಜಾರಿ , ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ , ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾದ ಕೆ ಆರ್ ಗಂಗಾಧರ , ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ , ನಿಕಟ ಪೂರ್ವ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾ ಮೇದಪ್ಪ ,ಸ.ಉ. ಹಿ. ಪ್ರಾ. ಶಾಲೆ ಅರಂತೋಡಿನ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ,  ಕೃಷ್ಣ ಬೆಟ್ಟ ಇವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜು ಮತ್ತು ಸಂಸ್ಥೆಗಳು ಪೂರ್ವಾಹ್ನ 9.00 ಗಂಟೆಯ ಒಳಗಾಗಿ ಧ್ವಜರೋಹಣವನ್ನು ಮುಗಿಸಿ 9.30 ಗಂಟೆಗೆ ಸ್ಥಳೀಯ ಸರ್ಕಾರ ವಾದ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಪ್ರಜೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷರು ನಡೆಸುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲ ಸರಕಾರಿ ಇಲಾಖೆಯವರು ಮತ್ತು ನಾಗರಿಕರು ಭಾಗವಹಿಸುವುದೆಂದು ತೀರ್ಮಾನಿಸಲಾಯಿತು.

ವಿಶೇಷ ಅತಿಥಿಯಾಗಿ ಎಂ ಬಿ ಸದಾಶಿವ ಸಾಮಾಜಿಕ ಕಾರ್ಯಕರ್ತರು ಹಾಗೂ ಅಧ್ಯಕ್ಷರು ಎಂಬಿ ಫೌಂಡೇಶನ್ ಸುಳ್ಯ ಇವರು ಭಾಗವಹಿಸಲಿದ್ದಾರೆ. ಸ್ವಾತಂತ್ರ್ಯ ದಿನದಂದು ಅರಂತೋಡಿನಲ್ಲಿ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇವರ ಸಹಯೋಗದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಏಕಕಾಲಕ್ಕೆ 2 ಜಾಥಾಗಳು ಗ್ರಾಮ ಪಂಚಾಯಿತಿ ಯನ್ನು ಸೇರುವ ಮೂಲಕ ಧ್ವಜಾರೋಹಣವನ್ನು ಮಾಡುವುದಾಗಿದೆ . ಧ್ವಜಾರೋಹಣದ ನಂತರ ವಿಶೇಷ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗಾಗಿ ದೇಶಭಕ್ತಿಗೀತೆ ಮತ್ತು ಇತರ ಕೆಲವು ಸ್ಪರ್ಧೆಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ರವರು ಸ್ವಾಗತಿಸಿ ವಂದಿಸಿದರು.