ಪೆರಾಜೆ ಸೊಸೈಟಿಯಲ್ಲಿ ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ

0

ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಕೊಡಗು ಮತ್ತು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಜಂಟಿ ಆಶ್ರಯದಲ್ಲಿ ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಯು ಡಿ.14ರಂದು ಸಹಕಾರ ಸದನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಹಾಗೂ ತಾಲೂಕು ಸಾಗುವುಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿಯವರು ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ರವರು ಪ್ರಸ್ತಾವಿಕವಾಗಿ ಮಾತನಾಡಿದರು.

ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಯವರಾದ ಚಂದ್ರಶೇಖರ .ಕೆ ಇವರು ಕೊಕ್ಕೋ ಬೆಳೆಯ ಮರ ಸವರುವಿಕೆ (ಪ್ರೂನಿಂಗ್) ಮತ್ತು ಕೋಕೋ ಬೆಳೆ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿಯನ್ನು ರೈತ ಸದಸ್ಯರಾದ ಪುರುಷೋತ್ತಮ ನಡುಬೈಲು ರವರ ತೋಟದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಸದಸ್ಯರಿಗೆ ತರಬೇತಿಯನ್ನು ನೀಡಿದರು. ನಂತರ ಡಾ. ವಿಜೇತ್ ಸಹಾಯಕ ತೋಟಗಾರಿಕಾ ಅಧಿಕಾರಿಯವರು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ. ಪಿ ಎಂ , ಸಂಸ್ಥೆಯ ನಿರ್ದೇಶಕರುಗಳು, ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಕೊಕ್ಕೋ ಬೆಳೆಗಾರರು ಉಪಸ್ಥಿತರಿದ್ದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ. ಹೆಚ್. ಕೆ ಪ್ರಾರ್ಥಿಸಿ ,ಕಾರ್ಯಕ್ರಮವನ್ನು ನಿರೂಪಿಸಿದರು. ಸಹಾಯಕ ತೋಟಗಾರಿಕಾ ಅಧಿಕಾರಿಯವರಾದ ಡಾ. ವಿಜೇತ್ ಎಸ್. ಸ್ವಾಗತಿಸಿದರು.