ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

0

ವಾರದಲ್ಲಿ ಕಾಮಗಾರಿ ಆರಂಭ : ಸಚಿವ ಅಂಗಾರ ವಿಶ್ವಾಸ


ಬಹುಬೇಡಿಕೆಯ ಅರಂತೋಡು – ಅಡ್ತಲೆ – ಎಲಿಮಲೆ ರಸ್ತೆ ಕಾಮಗಾರಿಗೆ ಜ.೮ರಂದು ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ.
ಸುಮಾರು ಮೂರು ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಅಡ್ತಲೆಯಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ಮಾಡಲಾಯಿತು.


ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಸ್.ಅಂಗಾರರು ಈ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ ಅನುದಾನ ಇರಿಸಲಾಗಿದೆ. ಗುದ್ದಲಿಪೂಜೆ ನಡೆದ ಇಂದಿನಿಂದ ಮುಂದಿನ ೧ ವಾರದೊಳಗೆ ಕಾಮಗಾರಿ ಆರಂಭಿಸುತ್ತೇವೆ. ಮಾರ್ಚ್ ತಿಂಗಳೊಳಗೆ ಇರಿಸಲಾಗಿರುವ ಅನುದಾನದ ಕಾಮಗಾರಿ ಪೂರ್ಣಗೊಳಿಸಲಿzವೆ ಎಂದು ಹೇಳಿದರು. ಬಿಜೆಪಿ ಸರಕಾರ ಬಂದ ಬಳಿಕ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ೧೧೦ ಕೆ.ವಿ. ಕಾಮಗಾರಿಯೂ ಬಹು ಕಾಲದ ಬೇಡಿಕೆ.

ಅದಕ್ಕಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ಜ.೧೦ರಂದು ಶಿಲಾನ್ಯಾಸ ನಡೆಯುವುದು ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಈ ರಸ್ತೆ ಅಭಿವೃದ್ಧಿಗೆ ಸಚಿವ ಅಂಗಾರರು ೩ ಕೋಟಿ ಅನುದಾನ ಇರಿಸಿದ್ದಾರೆ. ಆದರೂ ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಕೆಲವರು ಮತದಾನ ಬಹಿಷ್ಕಾರ, ಪ್ರತಿಭಟನೆ ಘೋಷಣೆ ಮಾಡಿದರು. ಅದಕ್ಕೆ ನಾವು ಹೆದರುವುದಿಲ್ಲ. ನಮ್ಮ ಧ್ಯೇಯ ಏನಿದ್ದರೂ ಅಭಿವೃದ್ಧಿಯೊಂದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ನಮ್ಮ ತಾಲೂಕಿನ ರಸ್ತೆಗಳು ಇಂದು ಅಭಿವೃದ್ಧಿಗೊಂಡಿವೆ ಎಂದು ಹೇಳಿದರು.


ಸ್ವಾಗತ ಮಾಡಿದ ಅರಂತೋಡು ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಮಾತನಾಡಿ ಅಂಗಾರರು ಶಾಸಕರಾದ ಬಳಿಕ ಈ ರಸ್ತೆ ಡಾಮರು ಕಂಡದ್ದು. ಬಳಿಕ ಎರಡು ಬಾರಿ ಡಾಮರೀಕರಣ ಆಗಿದೆ. ಇದೀಗ ಮತ್ತೆ ಅನುದಾನ ಇರಿಸಿ ರಸ್ತೆ ಅಭಿವೃದ್ಧಿ ಆಗುತ್ತದೆ. ಈ ನಡುವೆ ಮತದಾನ ಬಹಿಷ್ಕಾರ ಪ್ರತಿಭಟನೆ ಮಾತು ಕೇಳಿ ಬಂದಿತ್ತು. ಆದರೆ ನಮ್ಮ ಶಾಸಕರು ಹೇಳಿದಂತೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಮುಂದಿನ ದಿನದಲ್ಲಿ ಈ ರಸ್ತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ ಎಂದವರು ಹೇಳಿದರು.


ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ ಮೊದಲಾದವರಿದ್ದರು.


ಸಂಪಾಜೆ, ಅರಂತೋಡು, ತೊಡಿಕಾನ, ಮರ್ಕಂಜ ದ ಬಿಜೆಪಿ ಕಾರ್ಯಕರ್ತರು ಇದ್ದರು.