ಕೃಷಿಕರ ತೋಟಕ್ಕೆ ಬರುವ ಕಾಡಾನೆ ತಡೆಯಲು ಜೇನು ಪೆಟ್ಟಿಗೆ ಪ್ರಯೋಗ

0

ಮಂಡೆಕೋಲಿನ ದೇವರಗುಂಡ ತೋಟದಲ್ಲಿ ಚಾಲನೆ

ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬಾರದಂತೆ ತಡೆಯುವ ಹೊಸ ಪ್ರಯೋಗಕ್ಕೆ ಮಂಡೆಕೋಲು ಗ್ರಾಮದ ದೇವರಗುಂಡದ ತೋಟದಲ್ಲಿ ಚಾಲನೆ ನೀಡಲಾಗಿದೆ.

ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡರವರ ತೋಟದಲ್ಲಿ ಈ ಪ್ರಯೋಗ ಮಾಡಲಾಗಿದ್ದು, ತೋಟಕ್ಕೆ ಆನೆ ಬರುತ್ತಿದ್ದ ಜಾಗದಲ್ಲಿ ೧೦ ಜೇನು ಪಟ್ಟಿಗೆಳನ್ನು ಮೂರು ಫೀಟ್ ಅಂತರಕ್ಕೆ ಇರಿಸಲಾಗಿದೆ. ಈ ಹೊಸ ಪ್ರಯೋಗಕ್ಕೆ ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್‌ರವರು ಚಾಲನೆ ನೀಡಿದರು.
ಬಳಿಕ ಬಾಲಚಂದ್ರ ದೇವರಗುಂಡರ ಮನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮನೋಜ್ ಕುಮಾರ್‌ರವರು, “ಹನಿಮಿಷನ್ ಯೋಜನೆಯ ಮೂಲಕ ದೇಶದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಕರ್ನಾಟಕದ ಈ ಭಾಗದಲ್ಲಿ ಆನೆ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿರುವುದು ತಿಳಿದಿದೆ. ಇದರಿಂದ ಕೃಷಿಕರು ಬೆಳೆದ ಕೃಷಿ ನಷ್ಟವಾಗುತ್ತಿದ್ದು ಇದನ್ನು ತಡೆಯಲು ಹೊಸ ಚಿಂತನೆಯೊಂದನ್ನು ಆರಂಭಿಸಲಾಗಿದೆ. ಆನೆಗಳು ಕೃಷಿ ತೋಟಕ್ಕೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗಳನ್ನು ಇರಿಸಲಾಗುವುದು. ಇದರಿಂದ ಆನೆಗಳು ತೋಟಕ್ಕೆ ಬರುವುದನ್ನು ತಡೆಯಲು ಪ್ರಯೋಜನವಾಗುವುದಲ್ಲದೆ ಕೃಷಿಯೂ ನಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಪ್ರಾಯೋಗಿಕವಾಗಿ ಯೋಜನೆ ಅಳವಡಿಸಲಾಗಿದೆ ಎಂದು ಹೇಳಿದರು.


ಜೇನು ಪೆಟ್ಟಿಗೆಯನ್ನು ತೋಟಗಳಲ್ಲಿ ಇಡುವುದರಿಂದ ಜೇನು ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುವುದು. ಅಲ್ಲದೆ ಕೃಷಿಕರ ಕೃಷಿಯೂ ಉತ್ತಮವಾಗುತ್ತದೆ ಎಂದು ಅವರು ವಿವರ ನೀಡಿದರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ದಕ್ಷಿಣ ವಲಯ ಸಿಇಒ ಆರ್.ಎಸ್. ಪಾಂಡೇ ಪ್ರಾಸ್ತಾವಿಕ ಮಾತನಾಡಿದರು. ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ| ಕೆಂಚವೀರಪ್ಪ , ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ರಾಜ್ಯ ನಿರ್ದೇಶಕ ಡಾ| ಇ. ಮೋಹನ್ ರಾವ್, ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಾ ಕೋಲ್ಚಾರ್, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹ ನಿರ್ದೇಶಕ ಸೆಂಥಿಲ್ ಕುಮಾರ್ ವೇದಿಕೆಯಲ್ಲಿದ್ದರು.


ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ಜೇನು ಸೊಸೈಟಿ ನಿರ್ದೇಶಕ ಶಂಕರ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.
ಕು.ಸಾಗರಿಕಾ ದೇವರಗುಂಡ ಪ್ರಾರ್ಥಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಹಾಯಕ ನಿರ್ದೇಶಕ ಪಿ.ಎಸ್. ಬಾಲಕೃಷ್ಣನ್ ಸ್ವಾಗತಿಸಿದರು. ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವತಿಯಿಂದ, ದ.ಕ. ಜೇನು ವ್ಯವಸಾಯಗಾರರ ಸಂಘದ ಸಹಕಾರದೊಂದಿಗೆ ೩೫ ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಜೇನು ತರಬೇತಿ ನೀಡಲಾಗಿದೆ. ಪ್ರತೀ ಫಲಾನುಭವಿಗಳಿಗೆ ೧೦ ಜೇನು ಪೆಟ್ಟಿಗಳನ್ನು ನೀಡಲಾಗಿದೆ. ಇದನ್ನು ಆವರು ಕೃಷಿ ತೋಟಕ್ಕೆ ಆನೆ ಬರುವ ದಾರಿಯಲ್ಲಿ ಇಡಬೇಕು. ಆನೆಗಳು ಹೆಚ್ಚಾಗಿ ರಾತ್ರಿ ವೇಳೆ ಕೃಷಿ ತೋಟಕ್ಕೆ ಬರುವುದರಿಂದ ಜೇನು ನೊಣಗಳ ಶಬ್ದಕ್ಕೆ ಅವುಗಳು ಬರುವುದಿಲ್ಲವೆಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಾರೆ.


ನಾಗರಹೊಳೆಯಲ್ಲಿ ಪ್ರಯೋಗ
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹನಿ ಮಿಷನ್ ಯೋಜನೆಯಲ್ಲಿ ನಾಗರಹೊಳೆಯ ಕೊಡಂಗೇರಿಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜಿನವರ ಮೂಲಕ ಪ್ರಾಜೆಕ್ಟ್ ಮಾಡಿಸಲಾಗಿದೆ. ಕಾಪಿ ತೋಟಕ್ಕೆ ಕಾಡಾನೆಗಳು ಬರುತ್ತಿದ್ದು ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸಲಾಯಿತು. ಅಲ್ಲಿ ಆನಗಳು ಬರುವುದು ಶೇ.೭೦ ರಷ್ಟು ಕಡಿಮೆಯಾಗಿದೆ. ಆದರೆ ಕೆಲವು ಕಡೆಗಳಲ್ಲಿ ಆನೆಗಳು ಜೇನು ಪೆಟ್ಟಿಗೆ ಇರಿಸಲಾದ ಜಾಗಕ್ಕಿಂತಲೂ ಮತ್ತೊಂದು ಕಡೆಯಲ್ಲಿ ದಾರಿ ಮಾಡಿಕೊಂಡು ಬರುತ್ತವೆ. ಆ ದಾರಿಯಲ್ಲಿಯೂ ಪೆಟ್ಟಿಗೆ ಇಡಬೇಕು. ಈಪ್ರಯೋಗ ಯಶಸ್ವಿಯಾಗಿದೆ ಎನ್ನುತ್ತಾರೆ ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ಉಪನ್ಯಾಸಕ ಡಾ| ಕೆಂಚವೀರಪ್ಪರವರು. ಅವರು ಪ್ರಯೋಗಿಕವಾಗಿ ನಡೆಸಿದ ಪ್ರಯೋಗದ ವಿಡಿಯೋ ಚಿತ್ರೀಕರಣವನ್ನು ಸ್ಥಳದಲ್ಲಿ ಪ್ರದರ್ಶಿಸಲಾಯಿತು.