ವಿಜೃಂಭಣೆಯಿಂದ ನಡೆದ ಗುಳಿಗದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ
ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರುಗಿತು.
ಫೆ.27ರಂದು ಬೆಳಿಗ್ಗೆ ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ಜರುಗಿತು. ಬಳಿಕ ದೀಪ ಪ್ರತಿಷ್ಠೆಯಾಗಿ ವಿವಿಧ ಆಹ್ವಾನಿತ ಭಜನಾ ಸಂಘಗಳಿಂದ ಅಹ:ಪೂರ್ಣ ಭಜನೆ ಜರುಗಿತು.
ಪೂರ್ವಾಹ್ನ ಶ್ರೀ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲಸೇವೆ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನದಾನ ಜರುಗಿತು. ಅಪರಾಹ್ನ ಪುತ್ತೂರಿನ ಇಳಂತಾಜೆ ತರವಾಡಿನಲ್ಲಿ ವೀಳ್ಯನೀಡಿ ಶ್ರೀ ಹನುಮದೈವದ ಭಂಡಾರ ತರಲಾಯಿತು. ಸಾಯಂಕಾಲ ಭಜನಾ ಕಾರ್ಯಕ್ರಮದ ಮಂಗಳಂ , ಮಂಗಳವಾದ್ಯ , ವಾದನ ಸೇವೆ ಜರುಗಿತು.
ರಾತ್ರಿ ಶ್ರೀ ಗುಳಿಗರಾಜ ದೈವದ ಭಂಡಾರ ತೆಗೆಯಲಾಯಿತು. ಬಳಿಕ ಶ್ರೀ ಆಂಜನೇಯ ಸ್ವಾಮಿಯ ಅಂಗಣಪ್ರವೇಶವಾಗಿ ಶ್ರೀ ಆಂಜನೇಯ ಸ್ವಾಮಿ ನೇಮೋತ್ಸವ, ಪ್ರಸಾದ ವಿರತಣೆ ಜರುಗಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ದೇವರ ಅಲಂಕಾರ ಪೂಜೆ ನಡೆದ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ಶ್ರೀ ಗುಳಿಗರಾಜ ದೈವದ ಕೋಲ, ದೈವ – ದೇವರ ಭೇಟಿ, ಬಟ್ಟಲು ಕಾಣಿಕೆ, ಶ್ರೀಮುಡಿ ಗಂಧಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಶಿವರಾಮ ರೈ ಕುರಿಯ, ಸಂಚಾಲಕ ರವಿಪ್ರಸಾದ್ ಕಜೆಗದ್ದೆ, ಪ್ರ.ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ ಅಡ್ಕಾರುಪದವು, ಕೋಶಾಧಿಕಾರಿ ಜಯಂತ ಗೌಡ ಅಡ್ಕಾರು, ಉಪಾಧ್ಯಕ್ಷ ನಾಗೇಶ್ ಅಡ್ಕಾರು, ಸೇವಾ ಸಮಿತಿ ಅಧ್ಯಕ್ಷ ವಿವೇಕ್ ರೈ ಡಿಂಬ್ರಿಗುತ್ತು ಸೇರಿದಂತೆ ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಭಜನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.