ಎ.09-16  ರಂಗಮನೆಯಲ್ಲಿ ‘ಚಿಣ್ಣರಮೇಳ’

0

ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗುವ
 ರಾಜ್ಯ ಮಟ್ಟದ ಮಕ್ಕಳ ರಂಗ ಶಿಬಿರ



    ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಎ.09 ರಿಂದ 16ರ ವರೆಗೆ ನಡೆಯುವ ಚಿಣ್ಣರಮೇಳ 2023 ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ವಿಶೇಷ  ಶಿಬಿರವಾಗಿರುತ್ತದೆ.


        ರಂಗಮಾಂತ್ರಿಕ ಡಾ|| ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಕರ್ನಾಟಕದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾಗಿರುವ ಅರವಿಂದ ಕುಡ್ಲ, ನೀನಾಸಂ ಸಂಗೀತ ಭಿಡೆ , ನೀನಾಸಂ ಉಜ್ವಲ್ ಯು.ವಿ., ನೀನಾಸಂ ನವೀನ್ ಕಾಂಚನ, ಮೈಮ್ ರಾಮದಾಸ್,  ನೀನಾಸಂ ಬಿಂದು ರಕ್ಷಿದಿ, ಅಕ್ಷತಾ ಕುಡ್ಲ, ಸುಮನಾ ಪ್ರಸಾದ್ ಮೂಡುಬಿದ್ರೆ, ತಾರಾನಾಥ ಕೈರಂಗಳ, ಝುಬೇರ್ ಖಾನ್ ಕುಡ್ಲ, ವಿ.ಕೆ.ವಿಟ್ಲ, ಹರೀಶ್ ಅರಸೀಕೆರೆ, ನೀನಾಸಂ ನವೀನ್ ಸಾಣಿಹಳ್ಳಿ,ಭಾಸ್ಕರ ನೆಲ್ಯಾಡಿ, ಶ್ರೀಹರಿ  ಪೈಂದೋಡಿ, ಪ್ರಸನ್ನ ಐವರ್ನಾಡು, ಚಂದ್ರಾಡ್ಕರ್, ಧನಂಜಯ ಮರ್ಕಂಜ, ಶಿವಗಿರಿ ಕಲ್ಲಡ್ಕ, ಭಾರತಿ ಕೈರಂಗಳ, ಅತುಲ್ ಭಟ್ ಉಡುಪಿ, ನಾದಾ ಮಣಿನಾಲ್ಕೂರು ಮುಂತಾದವರು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ.


    ಶಿಬಿರದಲ್ಲಿ ಬಹಳ ಮುಖ್ಯವಾಗಿ ರಂಗಾಭಿನಯ, ಕತಾರಚನೆ, ಮಾತುಗಾರಿಕೆ, ರಂಗದಾಟಗಳು, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ವರಾನುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು, ಪುಸ್ತಕ ಪ್ರೀತಿ, ಅಂದದ ಹಸ್ತಾಕ್ಷರ, ಪರಿಸರ ಪ್ರೀತಿ, ಪಕ್ಷಿ ಪ್ರಪಂಚ, ಚಿಟ್ಟೆ ಅಧ್ಯಯನ ಸಾಕ್ಷ್ಯಚಿತ್ರ, ಗಗನ ವಿಜ್ಞಾನ, ವಿಜ್ಞಾನದ ಸರಳ ಮಾದರಿಗಳು, ಭಿತ್ತಿಚಿತ್ರ, ಮಕ್ಕಳ ಕಲಾತ್ಮಕ ಚಲನಚಿತ್ರ ಪ್ರದರ್ಶನ, ಕ್ಲೇ-ಕುಂಬಾರಿಕೆ, ವಾದ್ಯವೃಂದ, ಜನಪದ ಸಂಗತಿಗಳು, ನಾಟಕ ತಯಾರಿ ಮತ್ತು ಪ್ರದರ್ಶನ..  ಪ್ರತಿದಿನ ಹಾಡು- ಕುಣಿತದ ಸಂಭ್ರಮ….ಇದಲ್ಲದೆ ಅಗತ್ಯಕ್ಕೆ ತಕ್ಕಷ್ಟು ಕ್ರಾಫ್ಟ್-ಚಿತ್ರಕಲೆ, ಗಾಳಿಪಟ, ಮುಖವರ್ಣಿಕೆಗಳೂ ಸೇರಿದಂತೆ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ  ಪೂರಕವಾದ, ಧನಾತ್ಮಕ ಚಿಂತನೆಯ ಹಲವು ವಿಚಾರಗಳು  ಶಿಬಿರದಲ್ಲಿ ಇರುತ್ತವೆ.


ಸಮಾರೋಪದಂದು ಪ್ರತಿಯೊಬ್ಬ ಮಗುವೂ ವೇದಿಕೆಯೇರಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ.
ಈ ಹಿಂದೆ ರಂಗಮನೆ ಶಿಬಿರದಲ್ಲಿ ಭಾಗವಹಿಸಿ ಈ ವರ್ಷವೂ ಬರುವ ಮಕ್ಕಳಿಗೆ  ಅನೇಕ ಹೊಸ ವಿಚಾರಗಳು ಸಿಗಲಿವೆ.



   ಸ್ವಚ್ಛ, ಸುಂದರ ಕಲಾತ್ಮಕ ಪರಿಸರದಲ್ಲಿ ಮೂಡಿ ಬರಲಿರುವ ಈ ಶಿಬಿರದಲ್ಲಿ  6 ರಿಂದ 15 ವರ್ಷದೊಳಗಿನ ಆಸಕ್ತ ಮಕ್ಕಳಿಗೆ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ ನೋಂದಾವಣಿ ಆರಂಭಗೊಂಡಿರುತ್ತದೆ. ಎಪ್ರಿಲ್ 02 ರಂದು ರಂಗಮನೆಯಲ್ಲಿ ಅರ್ಜಿಯನ್ನು ನೀಡಲಾಗುವುದು. ಮತ್ತು ಅದೇ ದಿನ ನೊಂದಾವಣಿ ಕೊನೆಯಾಗಿರುತ್ತದೆ.


ಮಾಹಿತಿಗಾಗಿ 9448215946 ಜೀವನ್ ರಾಂ ಸುಳ್ಯ , 9449640013  ಶ್ರೀಹರಿ ಪೈಂದೋಡಿ, 8660306473 ರವೀಶ್ ಪಡ್ಡಂಬೈಲ್,
9449331609 ಪ್ರಸನ್ನ ಐವರ್ನಾಡು ಇವರನ್ನು ಸಂಪರ್ಕಿಸಬಹುದು ಎಂದು  ರಂಗಮನೆಯ ಪದಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ಮತ್ತು ಡಾ. ವಿದ್ಯಾ ಶಾರದ ತಿಳಿಸಿರುತ್ತಾರೆ.

ಜೀವನ ಪಾಠ ಕಲಿಸುವ ರಂಗಮನೆ ಚಿಣ್ಣರಮೇಳ



32 ವರ್ಷದ ನನ್ನ ರಂಗ ಬದುಕಿನಲ್ಲಿ ಲಕ್ಷಕ್ಕಿಂತ ಹೆಚ್ಚು ಮಕ್ಕಳೊಂದಿಗೆ ಮಕ್ಕಳಾಗಿ ಅಭಿನಯ, ಆಟ, ಹಾಡು, ಕುಣಿತ, ಜಾದೂ, ನಾಟಕ ಅಂತ ಪ್ರೀತಿಯಿಂದ ಕಲಿಸುತ್ತಾ ಕಲಿಯುತ್ತಾ ಬೆಳೆದವನು ನಾನು.
ಈ ನನ್ನ ದೀರ್ಘ ರಂಗಾನುಭವದ ಆಧಾರದಲ್ಲಿ ಪ್ರತಿವರ್ಷವೂ ಶಿಬಿರವನ್ನು ಭಿನ್ನವಾಗಿ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಶಿಬಿರದ ವಿಷಯಗಳು ಎಂದೂ ಮಕ್ಕಳಿಗೆ ಹೊರೆ ಆಗದಂತೆ ಎಚ್ಚರ ವಹಿಸುತ್ತೇನೆ. ರಂಗಮನೆಯ ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ಸೃಜನಶೀಲತೆಯನ್ನು ವೃದ್ಧಿಸುವ, ದೇಸೀ ಕಲೆಯ ಬಗ್ಗೆ ಅವರಲ್ಲಿ ಆಸಕ್ತಿ ಹೆಚ್ಚಿಸುವ, ಮಕ್ಕಳು ಅನ್ನ ಮತ್ತು ನೀರಿನ ಮಹತ್ವವನ್ನು  ಅರಿಯುವ,  ಜೀವನ ಪಾಠವನ್ನು ಅರಿಯುವ ಶಿಬಿರವಾಗುವತ್ತ ಹೆಚ್ಚು ಗಮನ ಹರಿಸುತ್ತೇನೆ.  ಕಳೆದ ವರ್ಷ 306 ಮಕ್ಕಳು ಭಾಗವಹಿಸಿದ್ದರು. ವ್ಯವಸ್ಥೆ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ದೃಷ್ಟಿಯಿಂದ ಈ ವರ್ಷ ಸಂಖ್ಯೆಯನ್ನು ಅರ್ಧದಷ್ಟು ಇಳಿಸಿದ್ದೇವೆ. ರಂಗಮನೆಯಲ್ಲಿ ಇದು 22ನೇ ವರ್ಷದ ಶಿಬಿರ. ಇದೀಗ ರಂಗಮನೆಯ ಚಿಣ್ಣರಮೇಳ ರಾಜ್ಯಕ್ಕೆ ಮಾದರಿ ಶಿಬಿರವಾಗಿದೆ. ಎಪ್ರಿಲ್ 21 ರಿಂದ ಕಾರ್ಕಳ ಯಕ್ಷ ರಂಗಾಯಣದಲ್ಲಿ ಹಾಗೂ ಮೇ.01 ರಿಂದ ಮೂಡುಬಿದ್ರೆ ಆಳ್ವಾಸ್ ನಲ್ಲಿ ಚಿಣ್ಣರಮೇಳ ನಡೆಸಲಿದ್ದೇನೆ.
—- ಜೀವನ್ ರಾಂ ಸುಳ್ಯ
      ಅಧ್ಯಕ್ಷರು, ರಂಗಮನೆ