ಕಳಂಜ : ಬೆಂಗಳೂರಿನಲ್ಲಿ ಬಿದ್ದು ಗಂಭೀರ ಗಾಯಗೊಂಡ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ

0

ಕಟ್ಟಡದಿಂದ ಬಿದ್ದಿರುವ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ ಬೆಂಗಳೂರಿನ ಪೋಲೀಸರು

ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕನೋರ್ವ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆ ಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.

ಕಳಂಜ ಗ್ರಾಮದ ಮಣಿಮಜಲು ನಿವಾಸಿ ದಿ| ದೇರಣ್ಣ ಪೂಜಾರಿ ಎಂಬವರ ಪುತ್ರ ಯತೀಶ ಎಂಬವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎ.14ರಂದು ಬೆಳಿಗ್ಗೆ ಬೆಂಗಳೂರಿನ ಪೋಲೀಸರು ಯತೀಶನ ಅಕ್ಕನಿಗೆ ದೂರವಾಣಿ ಕರೆ ಮಾಡಿ ಯತೀಶರು ಎ.13ರಂದು ರಾತ್ರಿ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಬಗ್ಗೆ ಮಾಹಿತಿ ನೀಡಿದರೆನ್ನಲಾಗಿದೆ. ಅದರಂತೆ ಮನೆಯವರು ಬೆಂಗಳೂರಿಗೆ ತೆರಳಿ ಆತನನ್ನು ಮಂಗಳೂರಿನ ನೇರಳಕಟ್ಟೆಯ ಆಸ್ಪತ್ರೆಗೆ ಕರೆತಂದು ದಾಖಲಿಸಿದರೆನ್ನಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಿಸದೇ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದರೆನ್ನಲಾಗಿದೆ. ಅವರಿಗೆ 29 ವರ್ಷ ಪ್ರಾಯವಾಗಿತ್ತು. ಮೃತರು ಸಹೋದರಿಯರಾದ ಶ್ರೀಮತಿ ಕವಿತಾ, ಶ್ರೀಮತಿ ಕಾವ್ಯ ಬಾವಂದಿರು ಕುಟುಂಬಸ್ಥರನ್ನು ಅಗಲಿದ್ದಾರೆ.

ಯತೀಶರವರು ಕಟ್ಟಡದಿಂದ ಹೇಗೆ ಬಿದ್ದರೆನ್ನುವ ಬಗ್ಗೆ ಮನೆಯವರಿಗೂ ಮಾಹಿತಿ ದೊರೆತಿಲ್ಲವೆನ್ನಲಾಗಿದೆ. ಯತೀಶರವರು ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡಿದ್ದರಲ್ಲದೇ, ಸಹೋದರಿಯರಿಯರಿಗೆ ವಿವಾಹವಾಗಿದ್ದು, ಯತೀಶರು ಅವಿವಾಹಿತರಾದ ಕಾರಣ ಅವತ ಮನೆಯೇ ಖಾಲಿಯಾದಂತಾಗಿದೆ.