ಪ್ರವೀಣ್ ನೆಟ್ಟಾರು ಕನಸಿನ ಮನೆ ನಾಳೆ ಗೃಹ ಪ್ರವೇಶ

0

ನಾಯಕರು, ಗಣ್ಯರು, ಸ್ವಾಮೀಜಿಗಳು ಆಗಮಿಸುವ ನಿರೀಕ್ಷೆ

ಇಂದು ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ

ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹೆಸರಿನಲ್ಲಿ ಬಿಜೆಪಿ ನಿರ್ಮಿಸಿರುವ ಮನೆ ” ಪ್ರವೀಣ್ ನಿಲಯದ” ಗೃಹ ಪ್ರವೇಶ ಎಪ್ರಿಲ್ 27 ರಂದು ನಡೆಯಲಿದೆ.

ಬೆಳಿಗ್ಗೆ ಶ್ರೀ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಲಿದೆ. ಇದೇ ವೇಳೆ ಬೆಳಗ್ಗೆ 11 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 7 ರಿಂದ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ.

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು (30 ) ಅವರನ್ನು 2022 ಜುಲೈ 26 ರಂದು ರಾತ್ರಿ ದುಷ್ಕರ್ಮಿಗಳು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಘಟನೆ ಬಳಿಕ ಹಿಂದೂ ಸಂಘಟನೆಗಳು ಬಿಜೆಪಿ ಸರಕಾರದ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳು, ನಾಯಕರು ಪ್ರವೀಣ್ ಮನೆಗೆ ಆಗಮಿಸಿದ್ದರು.

ಹತ್ಯೆ ಪ್ರಕರಣವನ್ನು ಎನ್.ಐ.ಎ. ಒಪ್ಪಿಸಲಾಗಿದ್ದು ಪಿ.ಎಫ್.ಐ. ಕಾರ್ಯಕರ್ತರಾಗಿರುವ ಹಲವು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು. ಕೇಂದ್ರ ಸರಕಾರ ಪಿ.ಎಫ್. ಐ. ಸಹಿತ ಕೆಲವು ಸಂಘಟನೆಗಳನ್ನು ನಿಷೇಧ ಕೂಡಾ ಮಾಡಿತ್ತು.

ಪ್ರವೀಣ್ ನೆಟ್ಟಾರು ಅವರಿಗೆ ಸ್ವಂತ ಮನೆ ನಿರ್ಮಿಸಬೇಕೆಂಬ ಕನಸಿತ್ತು. ಆದರೆ ಕನಸು ನನಸಾಗುವ ಮುನ್ನವೇ ಅವರು ಸಾವಿಗೀಡಾದರು. ಅವರ ಕನಸಿನಂತೆ ಅವರ ಮನೆಯವರಿಗೆ ಹೊಸಮನೆ ನಿರ್ಮಿಸಿಕೊಡಲು ಬಿ.ಜೆ.ಪಿ. ಪಕ್ಷದಿಂದ ನಿರ್ಧರಿಸಲಾಗಿತ್ತು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಹೊಸ ಮನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಮೊಗರೋಡಿ ಕನ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಡಲಾಗಿತ್ತು.
ಪ್ರವೀಣ್ ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟು ಹೊಸ ಮನೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಮನೆ ಕೆಲಸ ಸಂಪೂರ್ಣಗೊಂಡಿದೆ.

ಸುಮಾರು 60 ಲಕ್ಷ ವೆಚ್ಚದಲ್ಲಿ 2700 ಚದರ ಅಡಿಯ ಮನೆ ನಿರ್ಮಾಣವಾಗಿದ್ದು ಎ.27 ರಂದು ಗೃಹಪ್ರವೇಶ ನಡೆಯಲಿದೆ.

ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ

ನಾಳೆ ನಡೆಯುವ ಗೃಹಪ್ರವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿಮ್ ಕುಮಾರ್ ಕಟೀಲ್ ಸಹಿತ ಹಲವು ನಾಯಕರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಇಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸುಳ್ಯ ಪ್ರಭಾರಿ ಬೂಡಿಯಾರ್ ರಾಧಾಕೃಷ್ಣ ರೈ ಸಹಿತ ನಾಯಕರು ಭೇಟಿ ನೀಡಿದರು.

” ಪ್ರವೀಣ್ ಕನಸಿನ ಮನೆ ಬಿಜೆಪಿ ವತಿಯಿಂದ ನಿರ್ಮಾಣವಾಗಿದೆ. ಸಮಾಜಕ್ಕೆ ತ್ಯಾಗ ಮಾಡಿ ಬಲಿದಾನಗೈದ ಕಾರ್ಯಕರ್ತರನ್ನು ಬಿಜೆಪಿ ಯಾವತ್ತೂ ಬಿಟ್ಟು ಹಾಕುವುದಿಲ್ಲ ಪಕ್ಷ ಇನ್ನೂ ಈ ಕುಟುಂಬದೊಂದಿಗಿರುತ್ತದೆ. ಈ ಮನೆಯ ಮೂಲಕ ಪ್ರವೀಣ್ ನೆನಪಿನಲ್ಲಿರುತ್ತಾರೆ ಎಂದು ಸುದರ್ಶನ್ ಮೂಡಬಿದ್ರೆ ಹೇಳಿದರು. :