ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ನಿರ್ಲಕ್ಷ್ಯದ ಆರೋಪ

0

ಇಲಾಖೆಗಳು ಸೂಕ್ತ ಕ್ರಮ ಕೈಗೊಳುವಂತೆ ಸುಳ್ಯ ತಾಲೂಕು ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಆಗ್ರಹ

ಇತ್ತೀಚಿನ ಶೈಕ್ಷಣಿಕ ವರ್ಷಗಳಲ್ಲಿ ವರ್ಷಗಳಿಂದ ವರ್ಷಕ್ಕೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಉತ್ತರ ಪತ್ರಿಕೆಗಳಲ್ಲಿ ಮರು ಪರಿಶೀಲನಾ ಕಾರ್ಯಗಳು ಹೆಚ್ಚಾಗ ತೊಡಗಿದೆ.

ಪ್ರಥಮ ಹಂತದ ಉತ್ತರ ಪತ್ರಿಕೆಯ ಪರಿಶೀಲನೆಯ ಬಳಿಕ ರಾಜ್ಯಾದ್ಯಂತ ಫಲಿತಾಂಶಗಳು ಹೊರಬಂದು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಕೇಂದ್ರಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿಕೊಳ್ಳುತ್ತದೆ. ಆದರೆ ಹಿಂದಿನ ಕಾಲದಲ್ಲಿ ಕೆಲವು ಶಾಲಾ ಕಾಲೇಜುಗಳಲ್ಲಿ ಫಲಿತಾಂಶಗಳು ಬಂದ ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳಷ್ಟೆ ಮರು ಪರಿಶೀಲನೆಗೆ ಆಗ್ರಹಿಸಿ ಅರ್ಜಿಗಳನ್ನು ಹಾಕುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಮರುಪರಿಶೀಲನೆಗೆ ಅರ್ಜಿ ಹಾಕುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಬಳಿಕ ಮರುಪರಿಶೀಲನೆಯ ನಂತರ ಬಂದಾಗ ವಿದ್ಯಾರ್ಥಿಗಳು ಮೊದಲು ಪಡೆದ ಅಂಕಗಳಿಗಿಂತ ಮತ್ತೆ ಬರುವ ಅಂಕಗಳು ಇನ್ನೂ ಹೆಚ್ಚಾಗಿ ಶಾಲೆಗಳ ಫಲಿತಾಂಶ ಪಟ್ಟಿಗಳಲ್ಲಿ,ವಿದ್ಯಾರ್ಥಿಗಳ ಅಂಕ ಪಟ್ಟಿಗಳಲ್ಲಿ ಮತ್ತಷ್ಟು ಏರಿಕೆ ಗೊಳ್ಳುತ್ತದೆ. ಕೆಲವು ಸಂದರ್ಭ ಇದು ಗೊಂದಲಕ್ಕೂ ಕಾರಣವಾಗುತ್ತದೆ.

ಆದ್ದರಿಂದ ಪ್ರಥಮ ಹಂತದಲ್ಲಿ ಉತ್ತರ ಪತ್ರಿಕೆಗಳು ಸರಿಯಾಗಿ ಪರಿಶೀಲನೆ ಆಗದಿದ್ದಲ್ಲಿ ಕೆಲ ಸಂದರ್ಭಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತುಂಬಾ ಅಪಾಯಕಾರಿಯೂ ಆಗುತ್ತದೆ ಎಂದು ಸುಳ್ಯ ತಾಲೂಕು ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಮತ್ತು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಅಭಿಪ್ರಾಯ ಪಟ್ಟಿದೆ.

ಕೆಲ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆ ಬರೆದಿದ್ದು ಫಲಿತಾಂಶ ಬಂದಾಗ ಅಂಕಗಳು ತಾವು ನಿರೀಕ್ಷಿಸಿದಷ್ಟು ಇಲ್ಲದೆ ಇರುವುದು ಮತ್ತು ಕಡಿಮೆಯಾದದನ್ನು ಕಂಡು ಮನಸ್ಸಿನ ಧೈರ್ಯವನ್ನು ಕಳೆದುಕೊಂಡು ಅಪಾಯಕಾರಿ ತೀರ್ಮಾನಗಳನ್ನು ಕೈಗೊಳ್ಳುವ ಸನ್ನಿವೇಶಗಳು ಉಂಟಾಗುತ್ತದೆ.
ಅಲ್ಲದೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ನೀಡಿದಂತಹ ಶಿಕ್ಷಣ ಸಂಸ್ಥೆಗಳಿಗೂ ಕೂಡ ಅಂಕ ಕಡಿಮೆಯಾದ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲಾ ಗೊಂದಲಕ್ಕೆ ಕಾರಣ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಪ್ರಥಮ ಅಂತದಲ್ಲಿಯೇ ಹೆಚ್ಚಿನ ಜವಾಬ್ದಾರಿಯಿಂದ ಪರಿಶೀಲನೆ ಮಾಡುವಂತಹ ಕೆಲಸ ಕಾರ್ಯಗಳು ನಡೆಯದೇ ಇರುವುದು ಈ ರೀತಿಯ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಂಘಟನೆಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆಯುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ,ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಶಂಕರ್ ಪೆರಾಜೆ, ಸುಳ್ಯ ತಾಲೂಕು ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಕಾಡು ತೋಟ, ಜಂಟಿ ಸಂಘಟನೆಯ ಪದಾಧಿಕಾರಿಗಳಾದ ಜ್ಯೋತಿ ನಿಡುಬೆ, ಲಲಿತ ಚಂದ್ರಶೇಖರ್, ನಾರಾಯಣ ಕಿಲಂಗೋಡಿ, ಹಸೈನಾರ್ ಜಯನಗರ ಉಪಸ್ಥಿತರಿದ್ದರು.