ಕಲ್ಚರ್ಪೆಗೆ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ

0


ಕಸದ ಸಮಸ್ಯೆ ಶೀಘ್ರವಾಗಿ ಪರಿಹರಿಸುವ ಬಗ್ಗೆ ಸ್ಥಳೀಯರಿಗೆ ಭರವಸೆ

ಕಳೆದ ಎರಡು ದಿನಗಳಿಂದ ಸುಳ್ಯದ ಕಲ್ಚರ್ಪೆಯಲ್ಲಿ ಕಸದ ಬಗ್ಗೆ ಉಂಟಾಗಿರುವ ಸಮಸ್ಯೆಯನ್ನು ವೀಕ್ಷಿಸಲು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗಿರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕಳೆದ ಎರಡು ದಿನಗಳಿಂದ ಇಲ್ಲಿ ಕಸದ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಇಲ್ಲಿ ಬಂದಂತಹ ಕಸದ ರಾಶಿ ತುಂಬಿದ ವಾಹನವನ್ನು ತಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಮಳೆಗಾಲವಾದ ಹಿನ್ನೆಲೆಯಲ್ಲಿ ಕಸದ ರಾಶಿಯನ್ನು ತಂದು ಪಕ್ಕದ ಅರಣ್ಯ ಭಾಗದಲ್ಲಿ ಸುರಿಯುತ್ತಿದ್ದು, ಅಲ್ಲಿ ಸೊಳ್ಳೆ ಉತ್ಪತ್ತಿಗಳು ಹೆಚ್ಚಾಗಿ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇಲ್ಲಿ ಮತ್ತೆ ಕಸವನ್ನು ತಂದು ಹಾಕಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.


ಈ ಎಲ್ಲಾ ವಿಷಯಗಳಿಂದ ಶಾಸಕರು ಇಂದು ಸ್ಥಳಕ್ಕೆ ಭೇಟಿ ನೀಡಿದ್ದು ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕರೊಂದಿಗೆ ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದು, ಈ ಭಾಗದ ಕಸದ ವಿಷಯದ ಕುರಿತು ಶಾಸಕರಿಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರು ಕೂಡ ಶಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.