ಸುಳ್ಯ ಕಾಂಗ್ರೆಸ್‌ನ ಗೊಂದಲ ಮುಗಿದ ಅಧ್ಯಾಯ : ಮಮತಾ ಗಟ್ಟಿ

0

ಕಾಂಗ್ರೆಸ್ ಸಭೆಯ ಬಳಿಕ ಕೆಪಿಸಿಸಿ ಉಸ್ತುವಾರಿಯ ಹೇಳಿಕೆ

ಒಗ್ಗಟ್ಟಿನ ಸಭೆಯ ಬಳಿಕ ಉಚ್ಛಾಟನೆ, ಶೋಕಾಸ್ ನೋಟೀಸ್ ವಿಚಾರವಿಲ್ಲ

ಸುಳ್ಯ ಕಾಂಗ್ರೆಸ್‌ನಲ್ಲಿ ಚುನಾವಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಭಿನ್ನಾಪ್ರಾಯಗಳಿತ್ತು. ಇಂದು ನಡೆದ ಯಶಸ್ವಿ ಸಭೆಯ ಬಳಿಕ ಅದೆಲ್ಲವೂ ಶಮನಗೊಂಡಿದೆ. ನಾವೆಲ್ಲರೂ ಒಂದಾಗಿದ್ದೇವೆ. ಸಭೆಯಲ್ಲಿ ವ್ಯಕ್ತವಾದ ವಿಚಾರಗಳ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಕೆಪಿಸಿಸಿಯ ಗಮನಕ್ಕೆ ತರಲಾಗುವುದು ಎಂದು ಕೆಪಿಸಿಸಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕಗೊಂಡ ಕಾಂಗ್ರೆಸ್ ನಾಯಕಿ ಶ್ರೀಮತಿ ಮಮತಾ ಗಟ್ಟಿ ಹೇಳಿದ್ದಾರೆ.

ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯ ಬಳಿಕ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆಪಿಸಿಸಿಯಿಂದ ನನ್ನನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿ ಆದೇಶ ನೀಡಿದ ಬಳಿಕ ಇಲ್ಲಿಯ ಗೊಂದಲದ ಕುರಿತಂತೆ ಕಾರ್ಯಕರ್ತರ, ನಾಯಕರ ಭಾವನೆಯನ್ನು ಅರಿಯಲು ಸೂಚನೆ ನೀಡಿದ್ದರು. ಅದರಂತೆ ಮೊನ್ನೆ ಕಡಬದಲ್ಲಿ ಹಾಗೂ ಇಂದು ಸುಳ್ಯದಲ್ಲಿ ಬ್ಲಾಕ್‌ಗಳ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಆಲಿಸಿದ್ದೇವೆ. ಒಂದು ಕುಟುಂಬದಂತೆ ಎಲ್ಲವನ್ನು ಚರ್ಚಿಸಿದ್ದೇವೆ. ಸಭೆ ಯಶಸ್ವಿಯಾಗಿದೆ. ಮತ್ತೆ ನಾವು ಒಂದಾಗಿ ಮುಂಬರುವ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಇಂದಿನ ಯಶಸ್ವಿ ಸಭೆಯ ಬಳಿಕ ಕಾಂಗ್ರೆಸ್‌ನಲ್ಲಿ ಹೊಸ ವಿಶ್ವಾಸ ಮೂಡಿದೆ. ಚುನಾವಣೆಯ ಸಂದರ್ಭದಲ್ಲಿ ಒಂದಷ್ಟು ಗೊಂದಲ ಇದ್ದ ಪರಿಣಾಮ ಸಭೆ ಹೇಗೆ ನಡೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ನಾಯಕರು, ಕಾರ್ಯಕರ್ತರ ಸಹಕಾರ ಮತ್ತು ದೇವರ ಆಶೀರ್ವಾದದಿಂದ ಯಶಸ್ವಿಯಾಗಿ ನಡೆದಿದೆ. ಇಲ್ಲಿಯ ಕೆಲವು ಬೆಳವಣಿಗೆಗಳ ಬಳಿಕ ಹಲವು ನಾಯಕರು ಕೂಡಾ ಕೆಪಿಸಿಸಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಇಂದು ಕೂಡಾ ಹಲವು ನಾಯಕರು ಮಾತನಾಡಿದ್ದಾರೆ. ಸಮನ್ವಯ ಸಮಿತಿಯಲ್ಲಿ ಈ ಕುರಿತು ಚರ್ಚಿಸುತ್ತೇವೆ. ಮುಂದೆ ಉಸ್ತುವಾರಿ ಸಚಿವರನ್ನು ಕರೆಸಿ ಮತ್ತೊಮ್ಮೆ ಒಗ್ಗಟ್ಟಿನ ಕಾರ್ಯಕ್ರಮ ಮಾಡುತ್ತೇವೆ. ಎಂದು ಮಮತಾ ಗಟ್ಟಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ, ಕೋರ್ ಕಮಿಟಿ ಪುನರ್ ರಚನೆ, ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಯ ನೇಮಕ ಸೇರಿದಂತೆ ಕಾರ್ಯಕರ್ತರು ಪ್ರಸ್ತಾಪಿಸಿದ ವಿಚಾರ್ಳ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ , ಇವೆಲ್ಲವೂ ಪಕ್ಷದ ಆಂತರಿಕ ವಿಚಾರ. ಸಂಬಂಧಪಟ್ಟ ನಾಯಕರ ಗಮನಕ್ಕೆ ತಂದು ಇದನ್ನು ಪರಿಹರಿಸುತ್ತೇವೆ ಎಂದು ಹೇಳಿದರು.

೧೧೦ ಕೆವಿ ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಸರಕಾರ ತಡೆ ನೀಡಿಲ್ಲ. ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ವಿಚಾರ ಫೂರ್ಣಗೊಳ್ಳುವ ಮೊದಲೆ ಚುನಾವಣಾ ಉದ್ದೇಶಕ್ಕೆ ಬಿಜೆಪಿಯವರು ಶಿಲಾನ್ಯಾಸ ಕಾರ್ಯಕ್ರಮ ನಡೆಸಿದ್ದಾರೆ. ನಮ್ಮ ಸರಕಾರ ಈ ಕಾಮಗಾರಿಯನ್ನು ಅನುಷ್ಠಾನ ಗೊಳಿಸಿಯೇ ಸಿದ್ಧ ಎಂದು ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಕಾಂಗ್ರೆಸ್ ನಾಯಕರುಗಳಾದ ಎನ್.ಜಯಪ್ರಕಾಶ್ ರೈ, ಶ್ರೀಮತಿ ರಾಜೀವಿ ಆರ್.ರೈ, ಟಿ.ಎಂ.ಶಹೀದ್, ಶ್ರೀಮತಿ ಗೀತಾ ಕೋಲ್ಚಾರ್, ಪಿ.ಎಸ್.ಗಂಗಾಧರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.