ಅಡ್ಪಂಗಾಯ : ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ – ಹಲವರಿಗೆ ಸನ್ಮಾನ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ ಮತ್ತು ದುರ್ಗಾಪೂಜಾ ಕಾರ್ಯಕ್ರಮ ಜ. 16 ರಂದು ನಡೆಯಿತು.

ಪ್ರಾತಃ ಕಾಲ ಗಣಪತಿ ಹವನ, ಸಂಜೆ ಅಯ್ಯಪ್ಪ ವ್ರತಧಾರಿಗಳಿಂದ ದೀಪಾರಾಧನೆ, ಭಜನಾ ಕಾರ್ಯಕ್ರಮವು ನಡೆಯಿತು. ಭಜನಾ ಸೇವೆಯನ್ನು ಅಡ್ಪಂಗಾಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯರುಗಳು ನೆರವೇರಿಸಿಕೊಟ್ಟರು.

ಕಿಶೋರ್ ಕೊಪ್ಪಡ್ಕ ಮದೆನಾಡು ಹಾಗೂ ಗುರುಪ್ರಸಾದ್ ಉರ್ದೋಳಿ ಮನೆ ಏನೆಕಲ್ಲು ಮತ್ತು ಮನೆಯವರು ವಿಶೇಷ ಸೇವಾ ಪ್ರಯುಕ್ತ ದುರ್ಗಾಪೂಜೆ ಹಾಗೂ ಅಯ್ಯಪ್ಪ ವ್ರತಧಾರಿಗಳಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ, ಹಿರಿಯ ಧಾರ್ಮಿಕ ಮುಂದಾಳು ಎನ್.ಎ ರಾಮಚಂದ್ರ, ಸುದ್ದಿ ಪತ್ರಿಕೆಯ ವರದಿಗಾರರಾದ ಮಹಮ್ಮದ್ ಶರೀಫ್, ಈಶ್ವರ ವಾರಣಾಸಿ, ನಿವೃತ್ತ ಯೋಧ ಹವಲ್’ದಾರ್ ಉಮೇಶ್ ಬೊಳುಗಲ್ಲು, ಗಾಯಕಿ ಶ್ರೀಮತಿ ಸಂಧ್ಯಾ ಮಂಡೆಕೋಲು ಹಾಗೂ ಜನಪದ ಕಲಾವಿದ, ದೈವ ನರ್ತಕ ಕೇಪು ಅಜಿಲ ಬೊಳಿಯಮಜಲು ಇವರುಗಳನ್ನು ಕ್ಷೇತ್ರದ ವತಿಯಿಂದ ಕ್ಷೇತ್ರದ ಧರ್ಮದರ್ಶಿ, ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯರು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯನ್ನು ಪರಿಗಣಿಸಿ, ಫಲ-ಪುಷ್ಪ, ಸನ್ಮಾನ ಪತ್ರದೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು.