ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪ್ಪೋದಲ್ಲಿ ಇಂಧನ ಉಳಿತಾಯ ಮಾಸಿಕ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುಳ್ಯ ಡಿಪ್ಪೋದಲ್ಲಿ ಇಂಧನ ಉಳಿತಾಯ ಮಾಸಿಕ ಹಾಗೂ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಫೆ.12ರಂದು ಸುಳ್ಯ ಡಿಪ್ಪೋದಲ್ಲಿ ನಡೆಯಿತು. ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಮತ್ತು ವಿಭಾಗೀಯ ಯಾಂತ್ರಿಕ ಅಭಿಯಂತರರಾದ ನಂದ ಕುಮಾರ್, ಘಟಕ ವ್ಯವಸ್ಥಾಪಕರಾದ ವಸಂತ್ ನಾಯಕ್ ಉಪಸ್ಥಿತರಿದ್ದರು.


ರಾಷ್ಟ್ರೀಯ ರಸ್ತೆ ಸುರಕ್ಷತ ಮಾಸಾಚರಣೆಯ ಕುರಿತು ಸುಳ್ಯ ಪೊಲೀಸ್ ಠಾಣಾ ಸಹಾಯಕ ಉಪನಿರೀಕ್ಷರುಗಳಾದ ಉದಯ ಭಟ್ ಹಾಗೂ ತಾರಾನಾಥ್ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಸ್ ಚಾಲಕರು ಮತ್ತು ನಿರ್ವಾಹಕರುಗಳಿಗೆ ಇಂಧನ ಉಳಿತಾಯ ಕುರಿತು ಸಂಸ್ಥೆಯ ಮುಖ್ಯಸ್ಥರು ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ೨೦೨೪ರ ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಗುಂಡೆಸೆತ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಗೋಪಾಲಕೃಷ್ಣರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಮಿಕ ಕಲ್ಯಾಣ ಅಧಿಕಾರಿ ಸೋಮಶೇಖರ ಸ್ವಾಗತಿಸಿ, ಲೋಕೇಶ್ ಕೆ ವಂದಿಸಿದರು. ಅಬುಸಾಲಿ ಮತ್ತು ಹರೀಶ್ ಸಹಕರಿಸಿದರು.