ಅಜ್ಜಾವರದಲ್ಲಿ ಸಂವಿಧಾನ ಜಾಗೃತಿ ಜಾಥಾ

0

ದಕ್ಷಿಣ ಕನ್ನಡ ಸುಳ್ಯ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಅಜ್ಜಾವರ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಭಾರತದ 75ನೇ ವರ್ಷದ “ಸಂವಿಧಾನ ಜಾಗೃತಿ ಜಾಥ” ಫೆ.20ರಂದು ಆಗಮಿಸಿತು.

ಜಾಥಾದಲ್ಲಿ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲಾ ಆವರಣಕ್ಕೆ ಶಾಲಾ ವಿದ್ಯಾರ್ಥಿಗಳಿಂದ, ಸಾರ್ವಜನಿಕರಿಂದ,ಅಜ್ಜಾವರ ಪಂಚಾಯತ್ ಆಡಳಿತ ಮಂಡಳಿ, ಗ್ರಾಮದ ಎಲ್ಲಾ ಅಧಿಕಾರಿ ವರ್ಗದವರಿಂದ, ಅಜ್ಜಾವರ ಸ.ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ನೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಜಯರಾಮ ಅತ್ಯಡ್ಕರವರು ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಹಾರಾರ್ಪಣೆ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಯರಾಮ ಅತ್ಯಡ್ಕ ದೀಪ ಬೆಳಗಿಸಿದರು.ನಂತರ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಂವಿಧಾನದ ಪೀಠಿಕೆ ಪ್ರತಿಜ್ಞಾ ವಿಧಿಯನ್ನು ಅಜ್ಜಾವರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ವೆಂಕಟ್ ರಾಜ್ ಬಿ.ಆರ್.ರವರು ಬೋಧಿಸಿದರು. ಕಾರ್ಯಕ್ರಮದಲ್ಲಿ
ಗಿರೀಶ್ ನಾವಡ ಬಳಗದವರಿಂದ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವರರ ಕುರಿತು ಕಿರು ಪ್ರಹಸನ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಅರುಣ್ ಕುಮಾರ್ ಪಡ್ಡಂಬೈಲ್ ಶಿಕ್ಷಕರು ಸ.ಪ್ರೌ.ಶಾಲೆ ಅಲೆಟ್ಟಿ, ಪಂಡಿತ್ ಜಯಕುಮಾರ್ ಹಾದಿಗ ಉಪಾಧ್ಯಕ್ಷರು ಕರ್ನಾಟಕ ಭೀಮಾ ಆರ್ಮಿ, ಪ್ರದೀಪ್ ಬೊಳ್ಳೂರು ವಕೀಲರು ಸುಳ್ಯ ಇವರುಗಳಿಂದ ನಮ್ಮ ದೇಶದ ಸಂವಿದಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಕುರಿತು ವಿಷಯ ಮಂಡನೆ ನಡೆಯಿತು. ಶಾಲಾ ಮಕ್ಕಳಿಗೆ ಮತ್ತು ಅರಿವು ಕೇಂದ್ರ ಅಜ್ಜಾವರದ ಓದುವ ಬೆಳಕು ಮಕ್ಕಳಿಗೆ ಸಂವಿಧಾನ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವರರ ಕುರಿತು ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯವರು, ಸಮಾಜ ಕಲ್ಯಾಣ ಇಲಾಖೆ ಆಧಿಕಾರಿಗಳು,ಆಡಳಿತ ಮಂಡಳಿ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು,ಗ್ರಾಮ ಮಟ್ಟದ ಅಧಿಕಾರಿಗಳು,ಪಂಚಾಯತ್ ವ್ಯಾಪ್ತಿಯ ಸಂಘ ಸಂಸ್ಥೆಗಳು,ವಿದ್ಯಾರ್ಥಿಗಳು, ಗಣ್ಯರು ,ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿರೂಪವನ್ನು ಸ.ಹಿ.ಪ್ರಾ.ಶಾಲೆ ಅಡ್ಪಂಗಾಯದ 5ನೇ ತರಗತಿ ವಿದ್ಯಾರ್ಥಿ ಅಬ್ದುಲ್ ರಹಿಮಾನ್ ರವರು ಪ್ರದರ್ಶಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಜ್ಜಾವರ ಶಾಲಾ ವಿದ್ಯಾರ್ಥಿಗಳು, ಸ್ವಾಗತವನ್ನು ಪಂಚಾಯತ್ ಪಿಡಿಓ ಶ್ರೀಮತಿ ಜಯಮಾಲ, ಧನ್ಯವಾದವನ್ನು ಅಜ್ಜಾವರ ಶಾಲಾ ಶಿಕ್ಷಕಿ ಶ್ರೀಮತಿ ಕಲ್ಪಲತ, ಕಾರ್ಯಕ್ರಮ ನಿರೂಪಣೆಯನ್ನು ಹಿ.ಪ್ರಾ.ಶಾಲೆ ಅಡ್ಪಂಗಾಯದ ಮುಖ್ಯೋಪಾಧ್ಯರಾದ ಶ್ರೀಮತಿ ಧನಲಕ್ಷ್ಮಿ ನೇರವೇರಿಸಿದರು.ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.