ಕೊಡಿಯಾಲ : ಮನೆಯ ಕಿಟಕಿ ಸರಳು ಮುರಿದು ಕಳ್ಳತನ

0

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು

ಮನೆಯ ಕಿಟಕಿಯ ಸರಳು ಮುರಿದು ಒಳ ನುಗ್ಗಿದ ಕಳ್ಳರು ಬೆಡ್ ರೂಮಿನ ಕಪಾಟಿನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ಕಳವುಗೈದ ಘಟನೆ ಕೋಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ಸಂಭವಿಸಿದೆ.
ಕೊಡಿಯಾಲ ಗ್ರಾಮದ ನಿವಾಸಿ ನಸೀರಾ ಐ.ಹೆಚ್. ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು ಮನೆಯವರು ಮಾರ್ಚ್ ೩ ರಂದು ಬೆಳಿಗ್ಗೆ ಇಂದ್ರಾಜೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಮಾರ್ಚ್ ೬ ರಂದು ಸಂಜೆ ಮನೆಗೆ ಹಿಂತಿರುಗಿ ಬಂದಾಗ ಮನೆಯಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.

ಇವರು ಮನೆಗೆ ಬಂದಾಗ ಬೆಡ್ ರೂಮಿನ ಬಾಗಿಲ ಒಳಗಡೆಯಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಇದರಿಂದ ಸಂಶಯಗೊಂಡ ಅವರು ರೂಮಿನ ಕಿಟಕಿಯ ಬಳಿ ಬಂದು ನೋಡಿದಾಗ ಕಿಟಕಿಯ ಬಾಗಿಲಿನ ಗಾಜು ಮುರಿದು ಚಿಲಕ ತೆಗೆದು ಕಿಟಕಿಯ ಸರಳನ್ನು ಮುರಿದಿದ್ದು ಕಂಡು ಬಂತು. ಕೂಡಲೇ ಮನೆಯವರು ಗೋದ್ರೆಜ್ ಪರಿಶೀಲಿಸಿದಾಗ ಗೋದ್ರೆಜ್‌ನಲ್ಲಿದ್ದ ೧. ೪೮ ಲಕ್ಷದ ೪೦ ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಅನ್ನು ಕಳವು ಗೈದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.