ಸುಳ್ಯದ ಕೆಂಪೇಗೌಡರೆಂದು ಕರೆಯಲ್ಪಟ್ಟು ಪ್ರಶಸ್ತಿ ಪುರಸ್ಕ್ರತರಾದ ನಿತ್ಯಾನಂದ ಮುಂಡೋಡಿ

ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇವರ ಸಹಕಾರ ದೊಂದಿಗೆ ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು, ಮಹಿಳಾ ಘಟಕ, ತರುಣ ಘಟಕ ಮತ್ತು ಗ್ರಾಮ ಸಮಿತಿಗಳ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜನ್ಮದಿನಾಚರಣೆ, ಉಪನ್ಯಾಸ ಹಾಗೂ ಸಹಕಾರಿ ರತ್ನ ನಿತ್ಯಾನಂದ ಮುಂಡೋಡಿಯವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಜು. ೧೨ರಂಂದು ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ. ಉದ್ಘಾಟನೆ ನೆರವೇರಿಸಿದರು. ಪಿ.ಸಿ. ಜಯರಾಮರು ಉಪನ್ಯಾಸ ಹಾಗೂ ಅಭಿನಂದನಾ ಭಾಷಣ ಮಾಡಿದರು.

ಡಾ| ರೇಣುಕಾಪ್ರಸಾದರು ನಿತ್ಯಾನಂದ ಮುಂಡೋಡಿಯವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನಗೈದರು. ಕಾರ್ಯಕ್ರಮದಲ್ಲಿ ಸರಕಾರಿ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟ್ ಪಡೆದ ಪ್ರತಿಭಾನ್ವಿತ ಬಡ ಹುಡುಗಿ ಆಶಿತಾ ಮುಳ್ಯರವರಿಗೆ ಗೌಡರ ಸೇವಾ ಸಂಘದಿಂದ ಸಂಗ್ರಹಿಸಲಾದ ೯೦ ಸಾವಿರ ರೂ.. ನಗದು ನೆರವು ಹಾಗೂ ಡಾ| ರೇಣುಕಾ ಪ್ರಸಾದರು ನೀಡಿದ ೧೦ ಸಾವಿರ ಹೀಗೆ ೧ ಲಕ್ಷ ರೂ.ಗಳನ್ನು ಹಸ್ತಾಂತರಿಸಲಾಯಿತು.









ಕಳೆದ ವರ್ಷ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದ ಜಾಕೆ ಮಾಧವ ಗೌಡ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ತರುಣ ಘಟಕದ ಅಧ್ಯಕ್ಷ ಪ್ರೀತಂ ಕಾಸಿನಗೂಡ್ಲು ಶುಭ ಹಾರೈಸಿ ಮಾತನಾಡಿದರು. ಕೆವಿಜಿ ಐಟಿಐ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ಮಡ್ತಿಲ, ಸೇವಾ ನಿವೃತ್ತಿ ಪಡೆದ ಹರಿಹರ ಪಲ್ಲತಡ್ಕ -ಕೊಲ್ಲಮೊಗ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮನಿಯಾನ, ನಿವೃತ್ತರಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಆಡಳಿತಾಧಿಕಾರಿಯಾದ ಭವಾನಿಶಂಕರ ಅಡ್ತಲೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.











