ಪೆರುವಾಜೆ : ಬೇಲಿ ನಾಶ ಆರೋಪ – ಪಂಚಾಯತ್ ಸದಸ್ಯನ ವಿರುದ್ಧ ಪ್ರಕರಣ ದಾಖಲು

0

ಪೆರುವಾಜೆಯಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ದ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದಾಮೋದರ ನಾಯ್ಕ ಪೆಲತ್ತಡ್ಕ ಎಂಬವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿದ್ದು ಈ ಬಗ್ಗೆ ಕಾಮಗಾರಿ ಉಸ್ತುವಾರಿ ವಹಿಸಿದ ವಾರ್ಡ್ ಸದಸ್ಯ ಸಚಿನ್ ರಾಜ್ ಶೆಟ್ಟಿಯಲ್ಲಿ ತಿಳಿಸಿದರೆನ್ನಲಾಗಿದೆ.
ಆಗ ಸಚಿನ್ ರಾಜ್ ಶೆಟ್ಟಿಯವರು ಇದನ್ನು ನಾನು ಸರಿಪಡಿಸುವುದಿಲ್ಲ ನೀನು ಏನು ಬೇಕಾದರೂ ಮಾಡಿಕೋ ಎಂದು ಉತ್ತರಿಸಿದರೆನ್ನಲಾಗಿದೆ.


ಆಗ ಮಾತಿಗೆ ಮಾತು ಬೆಳೆದು ಬಳಿಕ ದಾಮೋದರ ನಾಯ್ಕರವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಸಚಿನ್ ರಾಜ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸಚಿನ್ ರಾಜ್ ಶೆಟ್ಟಿಯವರಲ್ಲಿ ವಿಚಾರಿಸಿದಾಗ ನಾನು ಪಂಚಾಯತ್ ಲೆಕ್ಕದಲ್ಲಿ ಕಣಿರಿಪೇರಿ ಮಾಡಿಸಲು ಹೋಗಿದ್ದೆ ಜೊತೆಗೆ ಪಿಡಿಒ ಹಾಗೂ ಪೊಲೀಸರು ಕೂಡ ಇದ್ದರು.ಅಲ್ಲಿ ಯಾವುದೇ ಗಲಾಟೆ ಆಗಲಿಲ್ಲ.ಕಣಿಯ ಮಣ್ಣು ತೆಗೆದಿದ್ದೇವೆ ಅಷ್ಟೆ.ಬೇಲಿ ನಾಶ ಮಾಡಲಿಲ್ಲ.ಇದು ನನ್ನ ವರ್ಚಸ್ಸಿಗೆ ಕುಂದು ತರಬೇಕು ಎನ್ನುವ ಉದ್ದೇಶದಿಂದ ನನ್ನ ಮೇಲೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.