ಪಂಜ ಪ್ರಾ.ಕೃ. ಪ.ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ತರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಇಂದು ನಡೆಯುತ್ತಿದೆ.

ಇದರ ಅಂಗವಾಗಿ ಇಂದು ಮುಂಜಾನೆ ಕೇನ್ಯ ಶಾಖೆ ನೂತನ ಕಟ್ಟಡದ ಶಿಲಾನ್ಯಾಸ ನಡೆಯಿತು.


ಬಳಿಕ ಸಂಘದಲ್ಲಿ ಧ್ವಜಾರೋಹಣ, ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟನೆ, ಸಂಘದ ಸಂಸ್ಥಾಪಕರಿಗೆ ಗೌರವಾರ್ಪಣೆ , ಸಭಾಭವನದ ಡಿಜಿಟಲ್ ನಾಮಫಲಕ ಹಾಗೂ ಛಾವಣಿ ಅನಾವರಣ ನಡೆದು ಬಳಿಕ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕೇನ್ಯ ಶಾಖೆ ನೂತನ ಕಟ್ಟಡದ ಶಿಲಾನ್ಯಾಸ, ಸಭಾಭವನದ ಡಿಜಿಟಲ್ ನಾಮಫಲಕ ಹಾಗೂ ಛಾವಣಿಯನ್ನು ಅನಾವರಣಗೊಳಿಸಿ ಉದ್ಘಾಟನೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಮಾಡಿ ಮಾತನಾಡಿ “ಸುಲಭ ಯೋಜನೆಗಳಿಂದ ರೈತರ ಮನೆ, ಮನ ಬೆಳಗುತ್ತಿರುವುದು ಸಹಕಾರಿ ಕ್ಷೇತ್ರ. ರಾಜ್ಯದ ಬೇರೆಡೆಯ ರೈತರು ಉಗ್ರ ಪ್ರತಿಭಟನೆ, ಹೋರಾಟ ಮಾಡಿದರೆ ದಕ್ಷಿಣ ಕನ್ನಡ, ಉಡುಪಿಯವರು ತಾವು ಬೆಳೆಯುವ ಬೆಳೆಯೊಂದಿಗೆ ಹೋರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಡಿಕೆ ಹಳದಿರೋಗ, ಎಲೆ ಚುಕ್ಕಿ ರೋಗ ದಿಂದ ಕೃಷಿಕರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಾನು ಹಾಗೂ ಇತರ ಶಾಸಕರು ಸರಕಾರದ ಗಮನ ಸೆಳೆದಿದ್ದು ಸರಕಾರ ಸ್ಪಂದಿಸುವ ಭರವಸೆ ದೊರೆತಿದೆ. ಅನಿವಾರ್ಯವಾದರೆ ನಿಮ್ಮೊಂದಿಗೆ ಸೇರಿ ಹೋರಾಟಕ್ಕೂ ಸಿದ್ಧ”. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರ ದ್ವಜಾರೋಹಣವನ್ನು ಮತ್ತು ಮರಣ ಸಾಂತ್ವನ ನಿಧಿ ಲೋಕಾರ್ಪಣೆ ಮಾಡಿ ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ನೆರವೇರಿಸಿ ಮಾತನಾಡಿ “ಇಂದಿನ ವಿದ್ಯಾರ್ಥಿಗಳಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಅರಿವಿಲ್ಲ. ಹೀಗಾಗಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಪಠ್ಯ ಅಳವಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು.”ಎಂದು ಹೇಳಿದರು.

ಸಹಕಾರ ರತ್ನ ಪುರಸ್ಕೃತ ಸಹಕಾರಿ ನಿತ್ಯಾನಂದ ಮುಂಡೋಡಿ ರವರು ಸ್ಥಳ ದಾನಿಗಳು ಹಾಗೂ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಮಾತನಾಡಿ
“ಈ ಕಾಲಘಟ್ಟದ ನಾವೆಲ್ಲಾ ಪುಣ್ಯವಂತರು. ಶಾಲೆಗಳು, ಸಹಕಾರಿ ಸಂಸ್ಥೆಗಳು ಶತಮಾನೋತ್ಸವ ಕಾಣುತ್ತಿದೆ. ಒಂದೊಮ್ಮೆ ತಾಲೂಕು ಕೇಂದ್ರವಾಗಬೇಕಾಗಿದ್ದ ಪಂಜ ಅದಾಗದೇ ಬೆಳವಣಿಗೆ ಕುಂಠಿತವಾಗಿತ್ತು. ಆದರೆ ಪಂಜ ಸೊಸೃಟಿಯ ಬೃಹತ್ ಕಟ್ಟಡ ಬೆಳೆಯುವ ಪಂಜಕ್ಕೆ ಹೊಸ ಸ್ಪರ್ಶ ನೀಡಿದೆ.” ಎಂದು ಹೇಳಿದರು .

ಸಭಾಧ್ಯಕ್ಷತೆಯನ್ನು ಮಂಗಳೂರು ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟು ರವರು ವಹಿಸಿ ಮಾತನಾಡಿ
“ಸದಸ್ಯರ ಕಷ್ಟಗಳಿಗೆ ಸ್ಪಂದಿಸಿ ,ಸದಾ ಸದಸ್ಯರ ಜೊತೆ ಇರುತ್ತದೆ ಕೃಷಿ ಪತ್ತಿನ ಸಹಕಾರ ಸಂಘಗಳು .ಈ ಮೂಲಕ ಗ್ರಾಮಗಳ ಉತ್ತಮ ಅಭಿವೃದ್ಧಿಗೆ ಸಹಕಾರ ಸಂಘಗಳು ಕಾರಣವಾಗಿದೆ.” ಎಂದು ಅವರು ಹೇಳಿದರು.

ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ ಬಹುಮಾನ ವಿತರಣೆ ಮಾಡಿ ಮಾತನಾಡಿ
“15 ರೂಪಾಯಿ ಠೇವಣಿ ಯಿಂದ ಕೋಟ್ಯಂತರ ವ್ಯವಹಾರ ನಡೆಸಲು ಸಂಘವು ಬೆಳೆದು ಬಂದ ಹಾದಿಯ ನೆನಪಿಸುವ ಹೆಮ್ಮೆಯ ಕಾರ್ಯಕ್ರಮ.
ಸಂಘದ ಬೆಳವಣಿಗೆ ಸದಸ್ಯರು, ಆಡಳಿತ, ಸಿಬ್ಬಂದಿಗಳು ಮುಖ್ಯ ಕಾರಣ” ಎಂದು ಅವರು ಹೇಳಿದರು.

ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ ಸಂಘದ ಸಂಸ್ಥಾಪಕರಿಗೆ ಗೌರವಾರ್ಪಣೆ ಮಾಡಿದರು.

ಸಂಘದ ಅಧ್ಯಕ್ಷ ಗಣೇಶ್ ಪೈ, ಉಪಾಧ್ಯಕ್ಷ ಕೆ. ರಘುನಾಥ ರೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ, ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,ಶ್ರೀಕೃಷ್ಣ ಭಟ್ ಪಟೋಳಿ, ವಾಚಣ್ಣ ಕೆರೆಮೂಲೆ,ಚಿನ್ನಪ್ಪ ಗೌಡ ಚೊಟ್ಟೆಮಜಲು,ಕಿಟ್ಟಣ್ಣ ಪೂಜಾರಿ ಕಾಂಜಿ, ಮುದರ ಐವತ್ತೊಕ್ಲು, ಶ್ರೀಮತಿ ಮೋಹಿನಿ ಬಿ.ಎಲ್, ಶ್ರೀಮತಿ ಹೇಮಲತಾ ಚಿದ್ಗಲ್ಲು, ವಲಯ ಮೇಲ್ವಿಚಾರಕ ಪ್ರದೀಪ್ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಸ್ಥಳದಾನಿಗಳಾದ ದಿ.ಪಾರ್ವತಿ ಬೆಳ್ಯಪ್ಪ ಗೌಡ ಮುರುಳ್ಯ, ದಿ.ನಾರಾಯಣ ರೈ ಕಂಡೆಬಾಯಿ,ಇಂದಿರಾ ಜೆ ರೈ ಕೇನ್ಯ,ದಿ.ಸೀತಾರಾಮ ಗೌಡ ಪಳಂಗಾಯ ರವರ ಪರವಾಗಿ ಅವರ ಮನೆಯವರು ಸನ್ಮಾನ ಸ್ವೀಕರಿಸಿದರು. ಸಂಘದ ಪೂರ್ವಾಧ್ಯಕ್ಷರುಗಳಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಆನಂದ ಗೌಡ ಕಂಬಳ, ಚಂದ್ರಶೇಖರ ಶಾಸ್ತ್ರಿ, ಸುಬ್ರಹ್ಮಣ್ಯ ಕುಳ ರವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಶಾಸಕಿ ಭಾಗೀರಥಿ ಮುರುಳ್ಯ, ನಿತ್ಯಾನಂದ ಮುಂಡೋಡಿ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ವಿದ್ಯಾ ಲಕ್ಷ್ಮೀ ಉದಯ ಕುಮಾರ್ ಪಟೋಳಿ ಪ್ರಾರ್ಥಿಸಿದರು.‌ ಸಂಘದ ಅಧ್ಯಕ್ಷ ಗಣೇಶ್ ಪೈ ಸ್ವಾಗತಿಸಿದರು. ಸೋಮಶೇಖರ ನೇರಳ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಪ್ರಾಸ್ತಾವಿಕ ಮಾತನಾಡಿದರು.ಸಂಘದ ಉಪಾಧ್ಯಕ್ಷ ರಘುನಾಥ ರೈ ಕೆ ವಂದಿಸಿದರು.

ಇಂದು ಅಪರಾಹ್ನ ಗಂಟೆ 2 ರಿಂದ 4 ತನಕ ಕೃಷಿ ವಿಚಾರಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಲಿದ್ದಾರೆ.


ಎಗ್ರಿಕಲ್ಚರ್ ಎಂ. ಎಸ್ಸಿ ( ಆಸ್ಟ್ರೇಲಿಯಾ )ಪಾರ್ಥಾ ವಾರಣಾಸಿ ರವರು ಅಡಿಕೆಯೊಂದಿಗೆ ಪರ್ಯಾಯ ಬೆಳೆಗಳ ಮೂಲಕ ಕೃಷಿಕರು ಸ್ವಾವಲಂಬಿಗಳಾಗುವ ಬಗೆ, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ರವರು ಜಲ ಸಂರಕ್ಷಣೆಯಲ್ಲಿ ಮಳೆ ಕೊಯ್ಲಿನ ವಿಧಾನಗಳು ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಸಲಿದ್ದಾರೆ.
ಸಂಜೆ ಗಂಟೆ 4 ರಿಂದ 6 ತನಕ ಸಾಂ‌ಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಗೊಳ್ಳಲಿದೆ. ಭಾಗವತರಾಗಿ ರವಿಚಂದ್ರ ಕನ್ನಡಿ ಕಟ್ಟೆ, ಗಿರೀಶ್ ರೈ ಕಕ್ಯೆಪದವು, ಚೆಂಡೆ-ಮದ್ದಲೆ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಚಕ್ರತಾಳ ಮುರಾರಿ ಭಟ್ ಪಂಜಿಗದ್ದೆ, ಮುಮ್ಮೇಳ ರಾಕೇಶ್ ರೈ ಅಡ್ಕ,ರಕ್ಷಿತ್ ಶೆಟ್ಟಿ ಪಡ್ರೆ ಪಾಲ್ಗೊಳ್ಳಲಿದ್ದಾರೆ.