ಗುತ್ತಿಗಾರು: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ 2024 ಸಮಾಪನ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಅರಿವು ಕೇಂದ್ರ, ಗ್ರಾ.ಪಂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ನಡೆದ 15 ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಮೇ 16 ರಂದು ಸಮಾಪನಗೊಂಡಿತು.

ಸ್ಥಳೀಯ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ, ಅಭಿನಯ ಗೀತೆ/ ನೃತ್ಯ ,ನಿಧಿ‌ ಶೋಧ , ಚಿತ್ರ ಕಲೆ , ವಿನೋದ ವಿಜ್ಞಾನ ,ಮಕ್ಕಳು ಮತ್ತು ಪ್ರಕೃತಿ ಬಾಂಧವ್ಯ,ಯೋಗ & ಧ್ಯಾನ ,ಮೋಜಿನ ಗಣಿತ , ಪರಿಸರ ಗೀತೆ ,ಚದುರಂಗ ಆಟ, ಸ್ವ ರಚಿತ ಕವನ/ ಕಥೆ , ಕಸದಿಂದ ರಸ, ಅರಿವು ಮೂಡಿಸುವ ಚಟುವಟಿಕೆ ಮಾತ್ರವಲ್ಲದೇ ಅಧ್ಯಯನ ಪ್ರವಾಸದಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣೆ , ಸುಬ್ರಹ್ಮಣ್ಯ ವಲಯ ಅರಣ್ಯ ಕಚೇರಿ, ಸಾಲು ಮರದ ತಿಮ್ಮಕ್ಕ ಪಾರ್ಕ್, ಕಲ್ಲಾಜೆ ನರ್ಸರಿ ವೀಕ್ಷಣೆ ಮಾಡಲಾಯಿತು.
ಸಮಾರೋಪ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರು ಹಿಂದಿ ಪಂಡಿತ್ ಶ್ರೀಮತಿ ರಾಜೇಶ್ವರಿ ಸಿ ವಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕ.ಸಾ.ಪ. ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ನಿವೃತ್ತ ಪಿಡಿಓ ಮಣಿಯಾನ ಪುರುಷೋತ್ತಮ ಉಪಸ್ಥಿತರಿದ್ದರು. ಪ್ರತಿ ದಿನದ ಸಂಪನ್ಮೂಲ ವ್ಯಕ್ತಿಗಳಿಗೆ ಇಲಾಖೆಯ ವತಿಯಿಂದ ಅಭಿನಂದನಾ ಪತ್ರ ನೀಡಲಾಯಿತು. ಕ.ಸಾ.ಪ.ನಿರ್ದೇಶಕ ಯೋಗೀಶ್ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕರು ಅಭಿಲಾಷ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. 40 ಶಿಬಿರಾರ್ಥಿಗಳು, ಪೋಷಕರು, ಸಂಜೀವಿನಿ ಸಂಘದವರು ಪಾಲ್ಗೊಂಡು ಯಶಸ್ವಿಗೊಳಿಸಿದರು.