ಬೆಳ್ಳಾರೆ ಸ.ಪ್ರ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ

0

ನೂತನ‌ ಅಧ್ಯಕ್ಷರಾಗಿ ರಕ್ಷಿತ್ ಪೆರುವಾಜೆ : ಕಾರ್ಯದರ್ಶಿಯಾಗಿ ಅನುರಾಜ್

ವಿದ್ಯಾಸಂಸ್ಥೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿ ಸಂಘದ ಪಾತ್ರ ಬಹುಮುಖ್ಯ : ದಾಮೋದರ ಕಣಜಾಲು

ವಿದ್ಯಾಸಂಸ್ಥೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿ ಸಂಘದ ಪಾತ್ರವೂ ಬಹುಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಹೊಸ ಯೋಚನೆ -ಯೋಜನೆಗಳೊಂದಿಗೆ ಹೊಸ ತಂಡ ಮುನ್ನಡೆಯಬೇಕು ಎಂದು ಬೆಳ್ಳಾರೆ ಡಾ.ಕೆ. ಶಿವರಾಮ ಕಾರಂತ ಸ.ಪ್ರಥಮ‌ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ದಾಮೋದರ ಕಣಜಾಲು ಹೇಳಿದರು.

ಜು.13 ರಂದು ನಡೆದ ಬೆಳ್ಳಾರೆ ಡಾ.ಕೆ. ಶಿವರಾಮ ಕಾರಂತ ಸ.ಪ್ರಥಮ‌ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲೇಜುಗಳು ಎದುರಿಸುತ್ತಿರುವ ಸವಾಲುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕೊರತೆಯು ಒಂದು. ಆ ನಿಟ್ಟಿನಲ್ಲಿ ಗಂಭೀರ ಚಿಂತನೆಯ ಅಗತ್ಯ ಇದೆ. ಒಂದಷ್ಟು ಧನಾತ್ಮಕ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಸೇರ್ಪಡೆಯಾಗುವ ಹಾಗೆ ನಮ್ಮ ಯೋಜನೆಗಳು ಇರಬೇಕು ಎಂದು ಅವರು ಅಭಿಪ್ರಾಯಿಸಿದರು.

ಕ್ಯಾಂಟಿನ್ ಕಟ್ಟಡ, ಬಯಲು ರಂಗಮಂದಿರ, ಆವರಣಗೋಡೆ, ಮಳೆ ಕೊಯ್ಲು ಅನುಷ್ಠಾನದಂತಹ ಬೇರೆ-ಬೇರೆ ಬೇಡಿಕೆಗಳು ನಮ್ಮ ಮುಂದಿವೆ. ಇದನ್ನು ವಿದ್ಯಾಸಂಸ್ಥೆ ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹಿರಿಯ ವಿದ್ಯಾರ್ಥಿಗಳು, ಸಮಾಜದ ಸಹಕಾರವೂ ಬೇಕು. ಹಾಗಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಭವಿಷ್ಯದ ಪೀಳಿಗೆಗೆ ಉಳಿಸುವ ಪ್ರಯತ್ನಕ್ಕೆ ಹಿರಿಯ ವಿದ್ಯಾರ್ಥಿ ಸಂಘವು ಕೊಡುಗೆ ನೀಡುವಂತಾಗಲಿ ಎಂದು ದಾಮೋದರ ‌ಕಣಜಾಲು‌ ನುಡಿದರು.

ಕ್ಯಾಂಟಿನ್ ಕಟ್ಟಡ
ನಿರ್ಮಾಣಕ್ಕೆ ಆದ್ಯತೆ
ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ರಕ್ಷಿತ್ ಪೆರುವಾಜೆ ಮಾತನಾಡಿ, ಕ್ಯಾಂಟಿನ್ ಕಟ್ಟಡ ನಿರ್ಮಾಣದ ನೆಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ವಿಶೇಷ ಆದ್ಯತೆ ನೀಡಲಿದೆ. ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಸಂಘವು ಕಾರ್ಯನಿರ್ವಹಿಸಲಿದೆ ಎಂದರು.

ನಿರ್ಗಮನ ಅಧ್ಯಕ್ಷ ವಾಸುದೇವ ಪೆರುವಾಜೆ, ಕಾರ್ಯದರ್ಶಿ ರಜನೀಶ್ ಸವಣೂರು ಅವರು ಕಳೆದ ಒಂಭತ್ತು ವರ್ಷಗಳ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವುದು, ಬೈಲಾ ರಚಿಸಿ ಸಂಘವನ್ನು ನೋಂದಣಿ ಮಾಡುವುದು, ಸಂಘಕ್ಕೆ ನಿಧಿ ಸಂಗ್ರಹ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶ ಸಂಭ್ರಮ, ಸಾಂಸ್ಕೃತಿಕ, ಕ್ರೀಡಾಕೂಟ ಆಯೋಜನೆ, ವಾಟ್ಸಪ್ ಗ್ರೂಪ್ ರಚನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಸಿ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಉಪಸ್ಥಿತರಿದ್ದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಗಿರೀಶ್ ಸಿ.ಆರ್.ನಿರೂಪಿಸಿದರು.

ಹಿರಿಯ ವಿದ್ಯಾರ್ಥಿಗಳ ಪರವಾಗಿ ನೂತನ ಕಾರ್ಯದರ್ಶಿ ಅನುರಾಜ್, ನಿರ್ಗಮ‌ನ ಕಾರ್ಯದರ್ಶಿ ರಜನೀಶ್, ಶಿವಪ್ರಸಾದ್ ಪೆರುವಾಜೆ, ಯಶೋಧಾ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ನೂತನ ಸಮಿತಿ ರಚನೆ
ಇದೇ ವೇಳೆ ಹಿರಿಯ ವಿದ್ಯಾರ್ಥಿ ಸಂಘದ ಮುಂದಿನ ಮೂರು‌ ವರ್ಷದ ಅವಧಿಗೆ ನೂತನ ಸಮಿತಿ ರಚಿಸಲಾಯಿತು. ಕಾರ್ಯಾಕಾರಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿ ನಂತರ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಕ್ಷಿತ್ ಪೆರುವಾಜೆ, ಕಾರ್ಯದರ್ಶಿಯಾಗಿ ಅನುರಾಜ್, ಉಪಾಧ್ಯಕ್ಷರಾಗಿ ರಜನೀಶ್ ಸವಣೂರು, ಖಜಾಂಜಿಯಾಗಿ ಯಶೋಧಾ ಪೆರುವಾಜೆ, ಜತೆ ಕಾರ್ಯದರ್ಶಿಯಾಗಿ ಶಿಲ್ಪ ಕೆ.ಎನ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಬ್ರಿಜೇಶ್ ರೈ, ಮಾಧ್ಯಮ ಪ್ರತಿನಿಧಿಯಾಗಿ ಕಿರಣ್ ಪ್ರಸಾದ್ ಕೆ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಶಿವಪ್ರಸಾದ್ ಪೆರುವಾಜೆ, ವಾಸುದೇವ ಪೆರುವಾಜೆ, ಡಾ.ಸಂದೀಪ್ ಕುಮಾರ್, ರಂಜಿತ್ ಡಿ ಅವರನ್ನು ಆಯ್ಕೆ ಮಾಡಲಾಯಿತು.