ಸದನದಲ್ಲಿ ಶಾಸಕರು

0

ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತುತ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲ್ಲೂಕಿನ ಮೆಸ್ಕಾಂನ ವಿವಿಧ ಉಪವಿಭಾಗಗಳಿಗೆ ಮಂಜೂರಾದ ಮತ್ತು ಪ್ರಸ್ತುತ ಖಾಲಿ ಇರುವ ಪವರ್‌ಮ್ಯಾನ್‌ ಹುದ್ದೆಗಳ ಸಂಖ್ಯೆ ಎಷ್ಟು, ಯಾವ ಕಾಲಮಿತಿಯೊಳಗೆ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಸರ್ಕಾರ ಕ್ರಮ ವಹಿಸುವುದು ಎಂದು ಶಾಸಕರು ಪ್ರಶ್ನಿಸಿದ್ದಾರೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನ, ಸುಳ್ಯ ಕಡಬ ಮತ್ತು ಸುಬ್ರಹ್ಮಣ್ಯ ಉಪವಿಭಾಗಗಳ ಶಾಖಾ ವ್ಯಾಪ್ತಿಯಲ್ಲಿ ದಿನಾಂಕ 30.06.2024 ಅಂತ್ಯಕ್ಕಿರುವಂತೆ ಮಂಜೂರಾದ, ಭರ್ತಿಯಾದ ಮತ್ತು ಖಾಲಿ ಇರುವ ಪವರ್‌ಮಾನ್‌ ಹುದ್ದೆಗಳ ವಿವರಗಳನ್ನು ನೀಡಿರುವ ಸರಕಾರ ಮೆಸ್ಕಾಂನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಉತ್ತರಿಸಿದ್ದಾರೆ.

ಸುಳ್ಯದಲ್ಲಿ 20 ಪವರ್‌ಮ್ಯಾನ್ ಹುದ್ದೆ ಮಂಜೂರಾಗಿದ್ದು 16 ಭರ್ತಿಯಾಗಿದ್ದು 4 ಹುದ್ದೆ ಖಾಲಿ ಇದೆ, ಕಡಬದಲ್ಲಿ 11 ಹುದ್ದೆಗಳು ಮಂಜೂರಾಗಿದ್ದು 7 ಹುದ್ದೆ ಭರ್ತಿಯಾಗಿದ್ದು 4 ಹುದ್ದೆ ಖಾಲಿಯಿದೆ. ಸುಬ್ರಹ್ಮಣ್ಯದಲ್ಲಿ ಮಂಜೂರಾದ 8 ಹುದ್ದೆಗಳಲ್ಲಿ 5 ಹುದ್ದೆ ಭರ್ತಿಯಾಗಿದೆ 3 ಹುದ್ದೆ ಖಾಲಿ ಇದೆ ಎಂದು ಸರಕಾರ ಮಾಹಿತಿ ನೀಡಿದೆ.

110 ಕೆ.ವಿ. ಕಾಮಗಾರಿಯು ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಶಾಸಕರು ಪ್ರಶ್ನಿಸಿದಾಗ ಸುಳ್ಯ 110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಹಾಗೂ ಪ್ರಸರಣ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದೆ. ವಿದ್ಯುತ್ ಉಪಕೇಂದ್ರದ ನಿಯಂತ್ರಣ ಕೊಠಡಿ ನಿರ್ಮಾಣ ಕಾರ್ಯ ಹಾಗೂ ಉಪಕೇಂದ್ರದ ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಸರಣ ಮಾರ್ಗದ ಒಟ್ಟು 89 ಸಂಖ್ಯೆಯ ಗೋಪುರಗಳಲ್ಲಿ 3 ಗೋಪುರಗಳ ತಳಪಾಯ ನಿರ್ಮಾಣಗೊಂಡಿರುತ್ತದೆ. ಬಾಕಿ ಉಳಿದ ಗೋಪುರಗಳ ತಳಪಾಯ ನಿರ್ಮಾಣಕ್ಕೆ ಪ್ರಸರಣ ಮಾರ್ಗ ಹಾದು ಹೋಗುವ ಜಮೀನು ಮಾಲೀಕರುಗಳ ತೀರ್ವ ಆಕ್ಷೇಪವಿರುವ ಕಾರಣ ಜಮೀನು ಮಾಲಿಕರಿಗೆ ಗೋಪುರ ತಳಪಾಯದ ವಿಸ್ತೀರ್ಣ ಹಾಗೂ ಪ್ರಸರಣ ಮಾರ್ಗದ ರಹದಾರಿ ವಿಸ್ತಿರ್ಣಕ್ಕೆ ಜಮೀನು ಪರಿಹಾರ ಮೊತ್ತವನ್ನು ಪಾವತಿಸಿಲು ಕ್ರಮಕೈಗೊಳ್ಳಲಾಗುತ್ತಿದ್ದು, ಜಮೀನು ಮೌಲ್ಯವನ್ನು ನಿರ್ಧರಿಸುವ ಪ್ರಸ್ತಾವನೆಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿಯಲ್ಲಿದೆ.

ಒಟ್ಟು 15.6812 ಹೆಕ್ಟರ್ ಅರಣ್ಯ ಪ್ರದೇಶದ ಬಿಡುಗಡೆಗೆ ದಿನಾಂಕ 10.01.2024 ರಂದು ಅನುಮೋದನೆ ದೊರೆತಿದ್ದು, ಅರಣ್ಯ ಇಲಾಖೆಯ ಷರತ್ತಿನಂತೆ ಖಾಸಗಿ ಜಮೀನುಗಳಲ್ಲಿ ಪ್ರಸರಣ ಮಾರ್ಗವನ್ನು ಪೂರ್ಣಗೊಳಿಸಿದ ನಂತರವಷ್ಟೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಬೇಕಾಗುತ್ತದೆ.
ಗುತ್ತಿಗೆ ಕರಾರಿನಂತೆ ಸದರಿ ಉಪಕೇಂದ್ರದ ಕಾಮಗಾರಿಯನ್ನು 07.11.2024 ರವರೆಗೆ ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.