ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

0


ಸವಣೂರಿನ ವಿದ್ಯಾರಶ್ಮಿಯಲ್ಲಿ ಕಾರ್ಗಿಲ್ ವಿಜಯ ದಿವಸ್‌ನ ಬೆಳ್ಳಿಹಬ್ಬ ಸಂಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಅವರು ಮಕ್ಕಳು ಮತ್ತು ಸಾರ್ವಜನಿಕರು ನಮ್ಮ ಸೇನೆಯ ಬಗ್ಗೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ತಿಳಿದುಕೊಂಡು ಅದಕ್ಕೆ ಬೇಕಾದ ಮಾದರಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ನಿವೃತ್ತ ಸೇನಾಧಿಕಾರಿ ಮಾಧವ ಬಿ.ಕೆ. ಅವರು ಮಾತನಾಡಿ ಇಂದು ನಮ್ಮಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಬೇಕಾದ ತುರ್ತು ಇದೆ. ನಮ್ಮ ಯೋಧರು ನಮಗಾಗಿ ಪ್ರಾಣತ್ಯಾಗ ಮಾಡಿದ್ದನ್ನು ಪ್ರತಿ ವರುಷವೂ ನೆನಪಿಸಿಕೊಂಡು ಅದನ್ನು ಆಚರಿಸಿ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು. ದೇಶಾಭಿಮಾನದ ಜೊತೆ ಜೊತೆಗೆ ನಾವು ಪರಿಸರ ಸ್ವಚ್ಛತಾ ಕಾಳಜಿ ಮತ್ತು ಸೇನೆ ಹಾಗೂ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕಿದೆ. ಹಾಗಾದಾಗ ಮಾತ್ರ ಇಸ್ರೇಲ್ ದೇಶದ ಮಾದರಿಯಲ್ಲಿ ನಾವು ಗಟ್ಟಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಮಾತನಾಡಿ ದೇಶಕ್ಕಾಗಿ ಸಾಯುವುದು ಅತ್ಯಂತ ಶ್ರೇಷ್ಠವೇ ಆಗಿದ್ದರೂ ಸಹ ಅದಕ್ಕಿಂತ ಒಂದು ಪಟ್ಟು ಮಿಗಿಲಾಗಿ ದೇಶಕ್ಕೋಸ್ಕರ ಶತ್ರುಗಳನ್ನು ಕೊಲ್ಲುವ ಕಾರ್ಯವನ್ನು ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು. ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ (ರಿ.) ಇದರ ನಿರ್ದೇಶಕಿ ರಶ್ಮಿ ಅಶ್ವಿನ್ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಗೌರವ ಉಪಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸನಾ ಫಾತಿಮಾ ಮತ್ತು ಹತ್ತನೆ ತರಗತಿಯ ಆಯಿಷತ್ ಹನ್ನಾ ಅವರು ಕಾರ್ಗಿಲ್ ಕುರಿತಾದ ಭಾಷಣಗಳನ್ನು ನೀಡಿದರು. ಹತ್ತನೆ ತರಗತಿಯ ವಿದಿಶಾ ಬಿ.ಕೆ. ಮತ್ತು ತಂಡದವರು ಪ್ರಾರ್ಥನೆ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೆ. ಯಶಸ್ವಿ ರೈ ಸ್ವಾಗತ, ಐದನೆ ತರಗತಿಯ ಶ್ವೇಪಾಲಿ ಜೈನ್ ಸಂವಿಧಾನ ಪೀಠಿಕೆಯ ವಾಚನ, ಎಂಟನೆ ತರಗತಿಯ ಲಿಬಾ ಫಾತಿಮಾ ಅತಿಥಿಗಳ ಪರಿಚಯ, ಹತ್ತನೆ ತರಗತಿಯ ಎಂ. ವೈಷ್ಣವಿ ವಂದನಾರ್ಪಣೆ ಮತ್ತು ಪ್ರಥಮ ಪಿಯುಸಿ ತರಗತಿಯ ಮೊಹಮ್ಮದ್ ಜಲಾಲುದ್ದೀನ್ ಎನ್. ಕಾರ್ಯಕ್ರಮ ನಿರೂಪಣೆಗಳಲ್ಲಿ ಸಹಕರಿಸಿದರು.