ಒಡಿಯೂರು ಸಂಸ್ಥಾ‌ನದಲ್ಲಿ ನಾಗರ ಪಂಚಮಿ ಮಹೋತ್ಸವ, ಸಾರ್ವಜನಿಕ ಆಶ್ಲೇಷ ಬಲಿಪೂಜೆ

0

ನಾಗನ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆಯಾಗಿದೆ: ಒಡಿಯೂರು ಶ್ರೀ

ವಿಟ್ಲ: ಸದ್ಭಾವನೆಯಿಂದ ಮಾಡಿದ ಸೇವೆಯಲ್ಲಿ ಯಶಸ್ಸು ಹೆಚ್ಚು. ನಾಗಮಂಡಲದ ಮಹತ್ವ ಅಪಾರವಾದುದು. ತಳಿರು ತೋರಣಗಳ ಅಲಂಕಾರಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರತಿಯೊಂದೂ ಆರಾಧನೆಯಲ್ಲಿ ವೈಜ್ಞಾನಿಕವಾದ ಸತ್ಯ ಅಡಗಿದೆ. ನಾಗನ ಆರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಆ.೯ರಂದು ಸಂಸ್ಥಾನದಲ್ಲಿ ನಡೆದ ನಾಗರ ಪಂಚಮಿ ಮಹೋತ್ಸವ, ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಬಳಿಕ ಅನುಗ್ರಹ ಸಂದೇಶ ನೀಡಿದರು.

ಪರಿಶುದ್ಧವಾದ ಮನಸ್ಸಿನಲ್ಲಿ ವ್ಯತ್ಯಾಸವಾದಾಗ ಅಪಾಯ ಹೆಚ್ಚು. ಮೂಲ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು.ಸಹೋದರತ್ವ ನಾಗರಪಂಚಮಿಯಲ್ಲಿ ಅಡಗಿದೆ. ಅಂತರಗಳು ಹೆಚ್ಚಾಗಿ ಸಂಬಂಧಗಳು ದೂರವಾಗುತ್ತಿದೆ.
ನಮ್ಮೊಳಗಿನ ಕಂದಕವನ್ನು ಪ್ರೀತಿಭಾವದಿಂದ ಸರಿಪಡಿಸಿಕೊಳ್ಳಬಹುದು. ವ್ಯಾಪಾರ ಬುದ್ದಿಯನ್ನು ಬಿಟ್ಟಾಗ ಬದುಕು ಬದುಕಾಗುತ್ತದೆ. ಗೆಲುವಿನ ಮೂಲ ನಂಬಿಕೆ. ಪ್ರಕೃತಿಯ ಆರಾಧನೆ ನಡೆಯಬೇಕು.


ಸೂತ್ರದಾರನ ಮರೆತರೆ ಅಪಾಯ‌ ಹೆಚ್ಚು.
ತಂತ್ರಜ್ಞಾನಗಳು ಹೆಚ್ಚಾದಂತೆ ಆದ್ಯಾತ್ಮಿಕವಾಗಿ ನಾವು ಹಿಂದೆ ಬೀಳುತ್ತಿದ್ದೇವೆ. ಆರೋಗ್ಯಕರ ವಿಚಾರಗಳ ಬಗ್ಗೆ ನಮ್ಮ ಒಲವು ಹೆಚ್ಚಿರಬೇಕು. ವಿಜ್ಞಾನ ಮತ್ತು ಆದ್ಯಾತ್ಮ ಜೊತೆಜೊತೆಗೆ ಸಾಗಬೇಕು. ಪ್ರಕೃತಿಯ ಒಳಗೆ ಇರುವ ಭಗವಂತನನ್ನು ಮರೆಯಬಾರದು ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀ ರವರು ದಿವ್ಯ ಸಾನಿಧ್ಯ ಕರುಣಿಸಿದ್ದರು.

ಪ್ರಾತಃಕಾಲ ಆರಾಧ್ಯ ದೇವರಿಗೆ ಮಹಾಪೂಜೆ, ಶ್ರೀ ಗಣಪತಿ ಹವನ, ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಅಭಿಷೇಕ,ಸಾಮೂಹಿಕ ಆಶ್ಲೇಷ ಬಲಿಪೂಜೆ ಆರಂಭಗೊಂಡಿತು.ಮಧ್ಯಾಹ್ನ ಕಲ್ಪೋಕ್ತ ಪೂಜೆ, ಮಹಾಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು.