ಸುಳ್ಯ ಘಟಕದ ನಿವೃತ್ತ ಗೃಹರಕ್ಷಕ ಪ್ರಭಾಕರ ಪೈಯವರಿಗೆ ಬೀಳ್ಕೊಡುಗೆ

0

ಹೋಮ್ ಗಾರ್ಡ್
ಇಲಾಖೆಯಿಂದ ನಿವೃತ್ತರಾದ ಸುಳ್ಯ ಘಟಕದ ಗೃಹರಕ್ಷಕ ಪ್ರಭಾಕರ ಪೈಯವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಆ. 30ರಂದು ಮಂಗಳೂರಿನ ಮೇರಿಹಿಲ್ ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

1964 ಜನವರಿ 23 ರಂದು ಜನಿಸಿದ ಪ್ರಭಾಕರ ಪೈಯವರು 2007ರ ಅಕ್ಟೋಬರ್ 01 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸತತವಾಗಿ 17 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ 2024ರ ಜ. 23ರಂದು ಸೇವಾ ನಿವೃತ್ತಿ ಪಡೆದಿದ್ದರು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಪ್ರಭಾಕರ ಪೈಯವರಿಗೆ ಹೂ, ಹಾರ, ಹಣ್ಣು ಹಂಪಲು ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ|| ಚೂಂತಾರು ಅವರು ಮಾತನಾಡುತ್ತಾ ನಿವೃತ್ತ ಗೃಹರಕ್ಷಕರ ಸೇವೆ ಬಹಳ ಸ್ಮರಣೀಯ. ಇವರು ಇತರ ಎಲ್ಲಾ ಗೃಹರಕ್ಷಕರಿಗೆ ಮಾದರಿಯಾಗಿ ಕೆಲಸ ಮಾಡಿದ್ದಾರೆ. ನಿಷ್ಕಾಮ ಸೇವೆ, ಸೇವೆಯೇ ಪರಮಗುರಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆ ಮಾಡುತ್ತಾ ಕನಿಷ್ಠ ಗೌರವ ಧನಕ್ಕೆ ಕೆಲಸ ಮಾಡುವ ಗೃಹರಕ್ಷಕರು ನಮ್ಮ ದೇಶದ ಆಸ್ತಿ. ನೆರೆಹಾವಳಿ, ಕೋಮುಗಲಭೆ ನಿಯಂತ್ರಣ, ಚುನಾವಣೆ ಬಂದೋಬಸ್ತ್ ಪೊಲೀಸ್ ಠಾಣಾ ಕರ್ತವ್ಯಗಳಲ್ಲಿ ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತಗಳಾದಾಗ ಸಮಾಜವನ್ನು ರಕ್ಷಿಸುವಲ್ಲಿ, ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ, ಬೆಳ್ತಂಗಡಿ ಘಟಕದ ಘಟಕಾಧಿಕಾರಿ ಜಯಾನಂದ, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್, ಪುತ್ತೂರು ಘಟಕದ ಅಭಿಮನ್ಯು ರೈ, ಬಂಟ್ವಾಳ ಘಟಕದ ಘಟಕಾಧಿಕಾರಿ ಐತಪ್ಪ, ಪ್ರಭಾರ ಘಟಕಾಧಿಕಾರಿಗಳಾದ ಸಂಜೀವ ವಿಟ್ಲ, ಪಣಂಬೂರು ಘಟಕದ ಶಿವಪ್ಪ ನಾಯ್ಕ, ಸುರತ್ಕಲ್‍ನ ರಮೇಶ್, ಸುಬ್ರಹ್ಮಣ್ಯ ಘಟಕದ ಹರಿಶ್ಚಂದ್ರ, ಉಪ್ಪಿನಂಗಡಿಯ ದಿನೇಶ್ ಬಿ., ಉಳ್ಳಾಲದ ಸುನಿಲ್, ಮೂಡಬಿದ್ರಿಯ ಚಂದ್ರಶೇಖರ್, ಬೆಳ್ತಂಗಡಿಯ ಚಾಕೋ, ವಿನೋದ್ ಆಳ್ವ, ಮಂಗಳೂರಿನ ಸಾರ್ಜಂಟ್ ಸುನಿಲ್ ಕುಮಾರ್, ಸುಲೋಚನ, ನಿಶಾ, ಚಂಪಾಶ್ರೀ, ಸಂಜಯ್, ರಾಹುಲ್ ಮತ್ತಿತರರು ಉಪಸ್ಥಿತರಿದ್ದರು.