ಪೇರಾಲು- ಅಂಬ್ರೋಟಿಯಲ್ಲಿ ಶ್ರೀ ಗಣೇಶೋತ್ಸವ : ಶೋಭಾಯಾತ್ರೆ

0

ಪೇರಾಲು- ಅಂಬ್ರೋಟಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀರಾಮ ಭಜನಾ ಮಂದಿರ ಹಾಗೂ ಯುವಕ ಮಂಡಲಗಳ ಆಶ್ರಯದಲ್ಲಿ ಸೆ. 7ರಂದು ಪೇರಾಲು ಅಂಬ್ರೋಟಿ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಜರಗಿತು. ಬೆಳಿಗ್ಗೆ ಗಂಟೆ 5:00ಕ್ಕೆ ಗಣಪತಿ ಹವನ ಬಳಿಕ ಅರ್ಚಕ ಮೀನಗದ್ದೆ ಪುರೋಹಿತ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಶ್ರೀ ಗಣಪತಿ ದೇವರ ಪ್ರತಿಷ್ಠೆ ಜರಗಿತು. ಸಾರ್ವಜನಿಕರಿಗೆ ಕ್ರೀಡಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರೋಹಿತ ಗಣೇಶ್ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಬದಿಕಾನ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ವೆಂಕಟ್ರಮಣ ಅತ್ಯಾಡಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ವಾಸುದೇವ ಬತ್ಲಿಮನೆ, ಹಾಗೂ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಅತ್ಯಾಡಿ ಗೌರವ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಅಪರಾಹ್ನ 3:30ಕ್ಕೆ ಪೇರಾಲು ಅಂಬ್ರೋಟಿ ಶ್ರೀರಾಮ ಭಜನಾ ಮಂದಿರದಿಂದ ಕುಕ್ಕೇಟಿ ಬಳಿಯ ಪಯಸ್ವಿನಿ ನದಿಯವರೆಗೆ ವೈಭವದ ಶೋಭಾಯಾತ್ರೆ ನಡೆಯಿತು. ಬಳಿಕ ವಿಧಿ ವಿಧಾನಗಳೊಂದಿಗೆ ಶ್ರೀ ದೇವರ ವಿಗ್ರಹ ಜಲ ಸ್ತಂಭನ ಮಾಡಲಾಯಿತು.