ಆಲೆಟ್ಟಿ ಕೃಷಿ ತೋಟಕ್ಕೆ ಆನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

0

ಆಲೆಟ್ಟಿ ಗ್ರಾಮದ ವಿವಿಧ ಕಡೆಗಳಲ್ಲಿ ಹಲವು ದಿನಗಳಿಂದ ನಿರಂತರ ಆನೆ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಕೃಷಿ ನಾಶವಾಗಿದ್ದು ಈ ಪ್ರದೇಶಕ್ಕೆ ಸುಳ್ಯ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಅವರು ಇಂದು ಭೇಟಿ ನೀಡಿದ್ದರು.

ಆಲೆಟ್ಟಿ ಗ್ರಾಮದ ತುದಿಯಡ್ಕ, ಪಡ್ಡು ಕಳಗಿ ಗುಡ್ಡೆಮನೆ, ಚಳ್ಳಂಗಾರು ಭಾಗದಲ್ಲಿ ಕೆಲ ದಿನಗಳಿಂದ ಸುಮಾರು 6 ರಿಂದ 8 ಆನೆಗಳು ರಾತ್ರಿಯ ಸಮಯದಲ್ಲಿ ಬಂದು ಬಾಳೆ ತೆಂಗು ಅಡಿಕೆ ಕೃಷಿ ಯನ್ನು ನಾಶಮಾಡಿವೆ. ಇಲ್ಲಿಂದ ಆನೆಗಳನ್ನು ದೂರ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.ರಾತ್ರಿ ಸಮಯದಲ್ಲಿ ಬರುವ ಆನೆಗಳನ್ನು ಓಡಿಸಲು ಈಗಾಗಲೇ ಇಲಾಖೆ ಕಾರ್ಯಚರಣೆ ಮಾಡುತ್ತಿದ್ದು, ಆಗಿರುವ ಕೃಷಿ ನಾಶಕ್ಕೆ ಅರ್ಜಿಯನ್ನು ಸಲ್ಲಿಸಲು ಮಾಹಿತಿಯನ್ನು ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸೋಲಾರ್ ಬೇಲಿ ಅಳವಡಿಸುವ ಮಾಹಿತಿಯನ್ನು ನೀಡಿದರು.

ತಮ್ಮ ಇಲಾಖೆಯ ವತಿಯಿಂದ ಸಿಗುವ ಎಲ್ಲಾ ಪರಿಹಾರ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮದ ಅರಣ್ಯ ಅಧಿಕಾರಿ ವೆಂಕಟೇಶ್, ಹಾಗೂ ಕೃಷಿ ನಾಶವಾದ ತೋಟದ ಮಾಲಿಕರಾದ ಕೃಪಾಶಂಕರ್ ತುದಿಯಡ್ಕ, ಆನಂದ ಗೌಡ ಗುಡ್ಡೆಮನೆ, ಲೊಲಾಜಾಕ್ಷ ಪಡ್ಡು, ಜಯಂತ ಪಡ್ಡು ಮತ್ತಿತರರು ಉಪಸ್ಥಿತರಿದ್ದರು.