ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ RDC-II ಮತ್ತು CATC ಶಿಬಿರ ಉದ್ಘಾಟನೆ

0

ಎನ್‌.ಸಿ.ಸಿ.ಯಲ್ಲಿ ಕಲಿತ ಶಿಸ್ತು ಜೀವನಕ್ಕೆ ದಾರಿ ದೀಪವಾಗಲಿ : ಡಾ. ಕೆ ವಿ ಚಿದಾನಂದ

ಎನ್.ಸಿ.ಸಿಯು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯ, ಶಿಸ್ತು, ಏಕತೆ, ಸಮರ್ಪಣಾ ಮನೋಭಾವವನ್ನು ಕಲಿಸುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲಿ ಕಲಿತ ಶಿಸ್ತು ಜೀವನಕ್ಕೆ ದಾರಿ ದೀಪವಾಗಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದರು ಕೆಡೆಟ್ ಗಳಿಗೆ ಕರೆ ನೀಡಿದರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ ನಡೆಯುತ್ತಿರುವ RDC-II ಮತ್ತು CATC ಶಿಬಿರವನ್ನು ಸೆಪ್ಟೆಂಬರ್ 22ರಂದು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡುತ್ತಾ ದೇಶದ ರಕ್ಷಣಾ ವ್ಯವಸ್ಥೆ ಮತ್ತು ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಎನ್ ಸಿ ಸಿ ಕೆಡೆಟ್ ಗಳಿಗೆ ವಿಫುಲ ಅವಕಾಶಗಳಿವೆ. ಮಹಿಳೆಯರು ಕೂಡ ಕಮಾಂಡೆಂಟ್ ಗಳಾಗಿ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ತರುವ ಸಂಗತಿ ಎಂದರು.

ಸಮಾರಂಭದಲ್ಲಿ ಶಿಬಿರದ ನೇತೃತ್ವವನ್ನು ವಹಿಸಿರುವ 19 ಕರ್ನಾಟಕ ಬೆಟಾಲಿಯನ್ ನ ಎನ್ ಸಿ ಸಿ ಯ ಕಮಾಂಡಿಂಗ್ ಆಫಿಸರ್ ಲೆಫ್ಟಿನೆಂಟ್ ಕರ್ನಲ್ ರೆಜಿತ್ ಮುಕುಂದನ್, ಸುಬೇದಾರ್ ಮೇಜರ್ ಶಿಜು ಪಿ, ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ,, ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಸೀತಾರಾಮ ಎಂ ಡಿ, ರಾಜ್ಯದ ವಿವಿಧ ಬೆಟಾಲಿಯನ್ ಗಳಿಂದ ಆಗಮಿಸಿದ ಅಧಿಕಾರಿ ವರ್ಗ, ವಿವಿಧ ಘಟಕಗಳ ಎನ್ ಸಿ ಸಿ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಹಾಗೂ ಎನ್ ಸಿ ಸಿ ಕೆಡೆಟ್ ಗಳು ಉಪಸ್ಥಿತರಿದ್ದರು.