ಮನೆಯ ಬದಿಯ ಜರಿಯುತ್ತಿರುವ ಬಾವಿಯ ಮಣ್ಣು ತೆಗೆಯುವ ಕಾರ್ಯ ಆರಂಭ
ಮರ್ಕಂಜದ ಮಿತ್ತಡ್ಕ ಮೋಹನರವರ ಪತ್ನಿ ಶೋಭಾಲತಾರವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ದೇಹದ ಹುಡುಕಾಟ ಇಂದು ಹಿಟಾಚಿ ಯಂತ್ರದ ಮೂಲಕ ಮತ್ತೆ ಆರಂಭಗೊಂಡಿದೆ.
ನಿನ್ನೆ ಅಗ್ನಿಶಾಮಕ ದಳದ ಉಪಸ್ಥಿತಿಯಲ್ಲಿ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು. ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು. ಹಾಗೂ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆಸಿ ಹುಡುಕುವ ಬಗ್ಗೆ ಪೋಲೀಸರಿಗೆ ಮನವಿ ಮಾಡಿಕೊಂಡರು. ಆದರೆ ಬಾವಿಯಲ್ಲಿ ದೇಹ ಇರುವ ಯಾವುದೇ ಕುರುಹು ಇಲ್ಲದ ಕಾರಣ ಸುಳ್ಯ ಪೋಲೀಸರು ಸುಳ್ಯ ತಹಶೀಲ್ದಾರ್ ಗೆ ಈ ಬಗ್ಗೆ ಮಾಹಿತಿ ನೀಡಿದರು. ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಶೀಲ್ದಾರ್ ರವರು ಹಿಟಾಚಿ ಯಂತ್ರದ ಮೂಲಕ ಮಣ್ಣು ಅಗೆಯಲು ಸೂಚನೆ ನೀಡಿದರು. ಅದರಂತೆ ಇದೀಗ ಹಿಟಾಚಿ ಯಂತ್ರ ಬಂದು ಮಣ್ಣು ತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿದು ಬಂದಿದೆ.
ಧನಸಂಗ್ರಹ : ಮೋಹನರವರು ಆರ್ಥಿಕವಾಗಿ ಬಡತನದಿಂದ ಇರುವ ಕಾರಣ ಹಿಟಾಚಿ ಯಂತ್ರದ ಹಣವನ್ನು ನೀಡಲು ಸ್ಥಳಿಯರು ಧನಸಂಗ್ರಹ ಮಾಡುತ್ತಿರುವುದಾಗಿಯೂ ತಿಳಿದು ಬಂದಿದೆ. ನಿನ್ನೆ ಸಂಜೆ ತಹಶೀಲ್ದಾರ್ ಬಂದಿದ್ದ ವೇಳೆ ಹಿಟಾಚಿ ಯಂತ್ರದ ಕೆಲಸದ ಮೊತ್ತವನ್ನು ತಾಲೂಕು ವಿಪತ್ತು ನಿರ್ವಹಣೆಯ ಮೂಲಕ ಒದಗಿಸಬೇಕೆಂದು ಮರ್ಕಂಜ ಪಂಚಾಯತ್ ಅಧ್ಯಕ್ಷೆ ಗೀತಾ ಹೋಸೊಳಿಕೆ ಹಾಗೂ ಸ್ಥಳೀಯರು ತಹಶೀಲ್ದಾರ್ ಗೆ ಬೇಡಿಕೆಯನ್ನು ಇಟ್ಟಿದ್ದರು ಎಂದು ತಿಳಿದು ಬಂದಿದೆ.