ಅರಂತೋಡು – ಎಲಿಮಲೆ ರಸ್ತೆಯಲ್ಲಿ ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಬೇಕೆಂದು ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆರಂತೋಡು- ಎಲಿಮಲೆ ಜಿಲ್ಲಾ ಮುಖ್ಯ ರಸ್ತೆಯ ಸುಮಾರು 3 ಕಿಲೋಮೀಟರ್ ರಸ್ತೆ ಅಗಲೀಕರಣ ಹಾಗೂ 2ಕಿಲೋಮೀಟರ್ ಮರುಡಾಮರಿಕರಣ ಕಾಮಗಾರಿಯನ್ನು ತಮ್ಮ ಇಲಾಖೆಯು ಅತ್ಯಂತ ಉತ್ತಮವಾಗಿ ಕಳೆದ ಎರಡು ವರ್ಷಗಳ ಹಿಂದೆ ನಡೆಸಲಾಗಿದೆ.
ರಸ್ತೆ ಅಭಿವೃದ್ಧಿಯ ನಂತರ ಈ ರಸ್ತೆಯಲ್ಲಿ ಮಿತಿಮೀರಿದ ಭಾರ ಹೊತ್ತ ಅನೇಕ ಲಾರಿಗಳು, ಟಿಪ್ಪರ್ ಗಳು ಅವ್ಯಾಹತವಾಗಿ ಸಂಚರಿಸುತ್ತಿರುವ ಕಾರಣದಿಂದ ರಸ್ತೆಯು ಸಂಪೂರ್ಣ ಹಾಳಾಗುವ ಸಂಭವ ಇದೆ. ಈ ರಸ್ತೆಯ ಧಾರಣಾ ಸಾಮರ್ಥ್ಯ ಎಷ್ಟು ಎಂಬ ಅರಿವು ಸಾರ್ವಜನಿಕರಿಗೆ ಮತ್ತು ಚಾಲಕರಿಗೆ ಇರುವುದಿಲ್ಲ. ಆದ್ದರಿಂದ ದಯವಿಟ್ಟು ತಮ್ಮ ಇಲಾಖೆಯ ವತಿಯಿಂದ ಈ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯದ ವಿವರಣೆ ಒಳಗೊಂಡ ಸೂಚನಾ ಫಲಕ ಅಳವಡಿಕೆ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಅಲ್ಲದೇ ಪ್ರಸ್ತುತ ಈ ರಸ್ತೆಯಲ್ಲಿ ಸುಮಾರು 50 ಟನ್ ಗಿಂತಲೂ ಅಧಿಕ ಭಾರ ಸಾಗಿಸುವ ಟಿಪ್ಪರ್ ಗಳು ಹಾಗೂ ಲಾರಿಗಳು ನಿರಂತರ ಸಂಚರಿಸುತ್ತಿವೆ. ಒಂದು ವೇಳೆ ಈ ರಸ್ತೆಗೆ ಅಷ್ಟು ಭಾರ ಹೊರುವ ಸಾಮರ್ಥ್ಯ ಇಲ್ಲದಿದ್ದರೆ ಈ ಬಗ್ಗೆ ತಾವು ರಸ್ತೆ ಸುರಕ್ಷತಾ ಸಮಿತಿಯಲ್ಲಿ ಚರ್ಚಿಸಿ, ಧಾರಣಾ ಸಾಮರ್ಥ್ಯ ದ ಸೂಚನಾ ಫಲಕದಲ್ಲಿಯೇ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧ ಮಾಡಬೇಕು ಎಂದು ವೇದಿಕೆಯವರು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದ್ದಾರೆ.