
ಸುಬ್ರಹ್ಮಣ್ಯ ಸಮೀಪದ ಕೈಕಂಬ ನಡುತೋಟ ಶ್ರೀ ಶಿರಾಡಿ ದೈವದ ವಾರ್ಷಿಕ ನೇಮೋತ್ಸವ ನಿನ್ನೆ ರಾತ್ರಿಯಿಂದ ಆರಂಭಗೊಂಡು ಇಂದು ಮಧ್ಯಾಹ್ನ ತನಕ ಜರಗಿತು. ನಿನ್ನೆ ಸಂಜೆ ಶಿರಾಡಿ ದೈವದ ಚಾವಡಿಯಿಂದ ಭಂಡಾರ ತೆಗೆದು ಕೊಡಿನಾಡದಲ್ಲಿ ಇಡಲಾಯಿತು. ನಂತರ ದೈವಗಳಿಗೆ ಎಣ್ಣೆ ಇಡಲಾಯಿತು.
ನಾಗಭ್ರಹ್ಮ, ಪಂಜುರ್ಲಿ, ಗುಳಿಗ, ಸತ್ಯದೇವತೆ, ಮುಂತಾದ ೧೫ ದೈವಗಳು ನರ್ತನ ಸೇವೆಯನ್ನು ಮಾಡಿ ಕೊನೆಗೆ ಶಿರಾಡಿ ದೈವದ ನೇಮೋತ್ಸವ ಜರಗಿತು. ಗ್ರಾಮದೈವವಾದ ಶಿರಾಡಿ ದೈವವು ನಡುತೋಟ, ಕಳಿಗೆ, ಹಾಗೂ ಪಳ್ಳಿಗದ್ದೆ ಪ್ರದೇಶಗಳಿಗೆ ಸಂಬಂಧಿಸಿದರೂ ಉಳಿದ ಪ್ರದೇಶಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಇಂದು ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯವರು ,ಮುಖ್ಯ ಪೂಜಾರಿಗಳು, ಸಹಾಯಕ ಪೂಜಾರಿಗಳು, ನಾಲ್ವಕ್ಕಿಯವರು, ಊರ ಗಣ್ಯರು , ಹಾಗೂ ಊರವರು ಪಾಲ್ಗೊಂಡಿದ್ದರು.