ಕುಕ್ಕೆ ಸುಬ್ರಹ್ಮಣ್ಯ ದೇವಳವು ವಿದ್ಯಾದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶ್ರೀ ದೇವಳದ ಆಡಳಿತದಲ್ಲಿರುವ ಎಸ್ಎಸ್ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿದ ವಿದ್ಯಾರ್ಥಿಗಳಿಗೆ ರೂ.೭ಲಕ್ಷ ೫ಸಾವಿರ ರೂವನ್ನು ದತ್ತಿನಿಧಿಯಾಗಿ ಹಸ್ತಾಂತರಿಸಿದ್ದೇವೆ. ಇದರಿಂದ ಉನ್ನತ ವ್ಯಾಸಂಗ ಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ ಈಗ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇದು ಸ್ಪೂರ್ತಿಯಾಗುತ್ತದೆ ಎಂದು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್ಎಸ್ಪಿಯು ಕಾಲೇಜಿನ ಕಾರ್ಯದರ್ಶಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ಎಸ್ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ದತ್ತಿನಿಧಿ ವಿತರಿಸಿ ಅವರು ಮಾತನಾಡಿದರು.ಶ್ರೀ ದೇವಳದಿಂದ ನೀಡುವ ಅನುಕೂಲತೆಗಳನ್ನು ಬಳಸಿಕೊಂಡು ಉತ್ತಮ ಅಂಕ ಪಡೆದು ಉನ್ನತಿ ಸಾಧಿಸುವತ್ತ ವಿದ್ಯಾರ್ಥಿಗಳ ಚಿತ್ತವಿರಬೇಕು. ಅಲ್ಲದೆ ದೇವಳದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದು ಕೇವಲ ಕಲಿಯುವಿಕೆ ಅಲ್ಲ ಬದಲಾಗಿ ಇದು ಸುಬ್ರಹ್ಮಣ್ಯನ ಪ್ರಸಾದ ರೂಪಿ ಜ್ಞಾನವಾಗಿದೆ. ವಿದ್ಯಾಸಂಸ್ಥೆಯಲ್ಲಿ ಕನಿಷ್ಠ ಶುಲ್ಕ ತೆಗೆದುಕೊಂಡು ಜ್ಞಾನ ನೀಡುತ್ತಿರುವುದು ಶ್ಲಾಘನೀಯ.ಅಲ್ಲದೆ ಶ್ರೀ ದೇವರ ಪ್ರಸಾದ ಬೋಜನ ಪ್ರತಿದಿನ ವಿದ್ಯಾಸಂಸ್ಥೆಯಲ್ಲಿ ಸ್ವೀಕರಿಸಲು ದೊರಕಿರುವ ಭಾಗ್ಯ ಪರಮ ಪವಿತ್ರವಾದುದು. ಕನಿಷ್ಠ ಶುಲ್ಕ ತೆಗೆದುಕೊಂಡು ಉಳಿದಂತೆ ಶ್ರೀ ದೇವಳದಿಂದ ಪ್ರತಿಯೊಂದು ವ್ಯವಸ್ಥೆ ಮಾಡಿಕೊಡುವ ಕಾರಣ ಇಲ್ಲಿ ಕಲಿಯುವುದು ಕೂಡಾ ದೇವರ ಪ್ರಸಾದವೇ ಆಗಿದೆ. ಆದುದರಿಂದ ಎಸ್ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುವುದು ಕೇವಲ ಕಲಿಯುವಿಕೆ ಆಗಿರದೆ ಸುಬ್ರಹ್ಮಣ್ಯನ ಪ್ರಸಾದ ರೂಪಿ ಜ್ಞಾನವಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
೨೦೨೩-೨೪ನೇ ಸಾಲಿನಲ್ಲಿ ಸಂಸ್ಥೆಯು ೧೦೦% ಫಲಿತಾಂಶ ದಾಖಲಿಸಿದೆ. ಕಳೆದ ವರ್ಷ ೨೨೬ ಮಂದಿ ಪರೀಕ್ಷೆ ಬರೆದಿದ್ದು ಅವರಲ್ಲಿ ಅತ್ಯಧಿಕ ಅಂಕ ಗಳಿಸಿದ ೧೬೩ ಮಂದಿಗೆ ಶ್ರೀ ದೇವಳದಿಂದ ದತ್ತಿನಿಧಿ ವಿತರಿಸಲಾಯಿತು.ರಾಜ್ಯಕ್ಕೆ ರ್ಯಾಂಕ್ ಬಂದ ದುರ್ಗಾಲಕ್ಷ್ಮಿ ಅವರಿಗೆ ರೂ ೧೦ ಸಾವಿರ, ೯೦%ಕ್ಕಿಂತ ಅಧಿಕ ಅಂಕಗಳಿಸಿದ ೪೬ ಮಂದಿಗೆ ೫ ಸಾವಿರ, ೮೫ ರಿಂದ ೮೯% ಪಡೆದ ೫೨ ಮಂದಿಗೆ ೩ ಸಾವಿರ, ೮೦ರಿಂದ ೮೪% ಪಡೆದ ೬೪ ಮಂದಿಗೆ ೨೦೦೦ ಸಾವಿರದಂತೆ, ೨೦೨೨-೨೩ ಸಾಲಿನ ೫೩ ಮಂದಿ, ಎಸ್ಎಸ್ಎಲ್ಸಿಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ೧೨ ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಸ್ತಾಂತರಿಸಲಾಗಿದೆ. ರೀತಿಯಾಗಿ ದೇವಳದಿಂದ ೨೨೮ ವಿದ್ಯಾರ್ಥಿಗಳಿಗೆ ಒಟ್ಟು ೭ ಲಕ್ಷದ ೫ ಸಾವಿರ ಮೊತ್ತದ ದತ್ತಿನಿಧಿ ಸಮಾಂಭದಲ್ಲಿ ಹಸ್ತಾಂತರಿಸಲ್ಪಟ್ಟಿತು ಎಂದು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸೋಮಶೇಖರ ನಾಯಕ್ ವಹಿಸಿದ್ದರು.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ ಮುಖ್ಯಅತಿಥಿಗಳಾಗಿದ್ದರು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಪ್ರೌಢಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಗಣೇಶ್.ಪಿ, ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ವೇದಿಕೆಯಲ್ಲಿದ್ದರು.