ಸುಳ್ಯ ಎಂ ಬಿ ಫೌಂಡೇಶನ್ ವತಿಯಿಂದ ಎಕ್ಸ್ಲೆನ್ಸ್ ಅವಾರ್ಡ್ ವಿತರಣೆ ಹಾಗೂ ವಿಶೇಷ ಚೇತನ ಮಕ್ಕಳ ಪ್ರತಿಭಾ ಪುರಸ್ಕಾರ

0

ವಿಶೇಷ ಚೇತನ ಮಕ್ಕಳ ಬಗ್ಗೆ ನೀಡುವ ಗೌರವ ಮತ್ತು ಸೇವೆ ದೇವರು ಮೆಚ್ಚುವಂತದ್ದು :ಯು. ಟಿ .ಖಾದರ್

ಸುಳ್ಯದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಾ ಬರುತ್ತಿರುವ ಎಂ ಬಿ ಫೌಂಡೇಶನ್ ಸಂಸ್ಥೆಯು ಸಮಾಜದಲ್ಲಿರುವ ವಿಶೇಷ ಚೇತನ ಮಕ್ಕಳ ಮೇಲೆ ತೋರಿಸುರುತ್ತಿವ ಪ್ರೀತಿ ಮತ್ತು ಅವರಿಗಾಗಿ ಮಾಡುತ್ತಿರುವ ಸೇವೆಗಳು, ಅವರಿಗೆ ಶಿಕ್ಷಣ ನೀಡಿ ಅವರ ಪ್ರತಿಭೆಗಳನ್ನು ಪೋಷಿಸುವ ಕೆಲಸ ದೇವರು ಮೆಚ್ಚುವ ಕೆಲಸವಾಗಿದೆ.


ಆದ್ದರಿಂದ ಇದರ ಸ್ಥಾಪಕರಾದ ಎಂ ಬಿ ಸದಾಶಿವರವರ ಆದರ್ಶ ವನ್ನು ಇಂದಿನ ಯುವ ಜನತೆ ಮಾದರಿಯಾಗಿಸಿ ಕ್ಕೊಂಡು ಸಮಾಜದಲ್ಲಿರುವ ಇಂತಹ ಮಕ್ಕಳ ರಕ್ಷಣೆ ಬಗ್ಗೆ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ರವರು ಎಂ ಬಿ ಫೌಂಡೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಅವರು ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ಸಾಂದೀಪ್ ವಿಶೇಷ ಶಾಲೆಯ ಸಭಾಂಗಣದಲ್ಲಿ ನಡೆದ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಹಾಗೂ ವಿಶೇಷ ಚೇತನ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮನುಷ್ಯರ ಹೃದಯದಲ್ಲಿ ಮಾನವೀಯತೆ,ಮಮತೆ, ಕರುಣೆ ಇದ್ದರೆ ಮಾತ್ರ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯ.

ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಪೋಷಕರು,ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ನಡೆಸುವ ಈ ಕೆಲಸ ಶ್ಲಾಘನೀಯ ಎಂದರು.

ಸಂಸ್ಥೆಗೆ ಮತ್ತು ಕೆಲಸಕ್ಕೆ ಎಲ್ಲರ ಸಹಾಯ ಸಹಕಾರ ಬೇಕು.ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಕೂಡ ಈ ಮಕ್ಕಳ ಮುಖವನ್ನು ನೋಡಿ ಸಹಾಯ ಸೇವೆಯ ಮೂಲಕ ಸಹಕರಿಸಿ ಎಂದು ಕರೆ ನೀಡಿದರು.
ಎಂ ಬಿ ರವರ ಈ ಸೇವೆ ಇದುವೇ ನಿಜವಾದ ದೇಶ ಸೇವೆ ಎಂದು ಅವರು ಬಣ್ಣಿಸಿದರು. ಸರಕಾರದಿಂದ ಅಥವಾ ಸಿಎಸ್‌ಆ‌ರ್ ಮೂಲಕ ಶಾಲೆಗೆ ನೆರವು ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಸಮಾರಂಭದ ಸಭಾಧ್ಯಕ್ಷತೆಯನ್ನುಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಕು.ಭಾಗೀರಥಿ ಮುರುಳ್ಯ ವಹಿಸಿ ಮಾತನಾಡಿ ‘ವಿಶೇಷ ಚೇತನ ಮಕ್ಕಳನ್ನು ಈ ರೀತಿ ಒಂದು ಸಂಸ್ಥೆಯ ಮೂಲಕ ಎಂ ಬಿ ಫೌಂಡೇಶನ್ ಬೆಳೆಸುತ್ತಿರುವುದು ಮತ್ತು ಅವರ ಪ್ರತಿಭೆಯನ್ನು ಗುರುತಿಸುವು lದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ನಾನು ನನ್ನ ಹುಟ್ಟುಹಬ್ಬವನ್ನು ಇಲ್ಲಿಯ ವಿಶೇಷ ಮಕ್ಕಳೊಂದಿಗೆ ಆಚರಣೆ ಮಾಡುತ್ತಿದ್ದು ಸುಳ್ಯದ ಪ್ರತಿಯೊಬ್ಬರು ಅವರರವರ ಹುಟ್ಟುಹಬ್ಬವನ್ನು ಈ ಮಕ್ಕಳೊಂದಿಗೆ ಆಚರಿಸಿ ಆಗ ನಮಗೂ ಮತ್ತು ಈ ವಿಶೇಷ ಮಕ್ಕಳಿಗೂ ಒಂದು ಸಂತೋಷ ತರುತ್ತೆ ಎಂದು ಹೇಳಿದರು.

ಕೊಲ್ಟಾರು ಸ.ಹಿ.ಪ್ರಾ ಶಾಲೆ ಶಿಕ್ಷಕಿ ಜಲಜಾಕ್ಷಿ ಹಾಗೂ ಸಂತ ಬ್ರಿಜಿಡ್ಸ್ ಸ.ಹಿ.ಪ್ರಾ ಶಾಲೆ ಶಿಕ್ಷಕಿ ವಲ್ಪ ಅವರಿಗೆ ಎಂ ಬಿ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯುವ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ, ನಾಟ್ಯ ಪ್ರವೀಣೆ ಮಂಜುಶ್ರೀ ರಾಘವ, ನಿವೃತ್ತ ದೈಹಿಕ ಶಿಕ್ಷಕ ನಟರಾಜ್, ಪ್ರತಿಭಾವಂತ ವಿದ್ಯಾರ್ಥಿನಿ ಯಶ್ವಿನಿ ಪಿ ಭಟ್ ಅವರನ್ನು ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಪ್ರಾಸ್ತವಿಕ ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ಕಿಶೋರ್ ಕುಮಾ‌ರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಸದಸ್ಯೆಕಿಶೋರಿ ಶೇಟ್, ತಹಶೀಲ್ದಾ‌ರ್ ಮಂಜುಳಾ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಸೈಂಟ್ ಜೋಸೆಫ್ ಶಾಲೆಯ ಸಂಚಾಲಕರಾದ ಫಾ. ವಿಕ್ಟರ್ ಡಿಸೋಜ, ಇಂದಿರಾ ದೇವಿಪ್ರಸಾದ್, ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಅತಿಥಿಗಳಾಗಿದ್ದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಯು.ಕೆ. ಹಾಗೂ ಶಿಕ್ಷಕಿ ಮಮತಾ ಎಸ್.ಕೆ. ಅಭಿನಂದನಾ ಭಾಷಣ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಶಾಲಾ ವರದಿ ವಾಚಿಸಿದರು. ಎಂ.ಬಿ.ಫೌಂಡೇಶನ್‌ನ ಕಾರ್ಯದರ್ಶಿ ಡಾ.ಸವಿತಾ ಲಕ್ಷ್ಮಿ ಕೋಶಾಧಿಕಾರಿ ಪುಷ್ಪಾ ರಾಧಾಕೃಷ್ಣ ಟ್ರಸ್ಟಿಗಳಾದ ಸೂರಯ್ಯ ಎಸ್.ಆ‌ರ್, ನೇತ್ರಾವತಿ ಪಡ್ಡಂಬೈಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕಿ ಮಮತಾ ಕೆ ಹಾಗೂ ಶಿಕ್ಷಕಿ ಮಮತಾ ಎಸ್.ಕೆ.ಕಾರ್ಯಕ್ರಮ ನಿರೂಪಿಸಿದರು.