ಬೆಳ್ತಂಗಡಿ ಸೌಜನ್ಯ ಹತ್ಯೆ ಘಟನೆಯನ್ನು ಸಹಿಸುವುದಿಲ್ಲ : ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ – ತಾಲೂಕು‌ ಭಜನಾ ಪರಿಷತ್ ಆಗ್ರಹ

0

ಧರ್ಮಸ್ಥಳ ಕ್ಷೇತ್ರ, ಖಾವಂದರ ಕುರಿತು ಅಪಪ್ರಚಾರ ಸರಿಯಲ್ಲ : ಮುಂದುವರಿದರೆ ಹೋರಾಟ

ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣವನ್ನು ನಾವು ಸಹಿಸುವುದಿಲ್ಲ. ಈ ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಸುಳ್ಯ ತಾಲೂಕು ಭಜನಾ ಪರಿಷತ್ ಈ ವಿಚಾರದಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರನ್ನು‌ಹಾಗೂ ಖಾವಂದರ ಹೆಸರನ್ನು ಎಳೆದು ಅಪಪ್ರಚಾರ ಮಾಡುವುದನ್ನು ನಾವು ಸಹಿಸುವುದಿಲ್ಲ. ಇದು‌ ಹೀಗೆ ಮುಂದುವರಿದರೆ ನಾವು ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಜು.29 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ರವರು ಮಾತನಾಡಿ
“ಸತ್ಯ ಧರ್ಮದ ನಿಲಯ ಎಂದೆ ಖ್ಯಾತಿಯ ಪ್ರಸಿದ್ಧ ಕ್ಷೇತ್ರಧರ್ಮಸ್ಥಳ. ಭಕ್ತರ ಪಾಲಿನ ಪರಮ ಪಾವನ ಕ್ಷೇತ್ರ ಇದಾಗಿದೆ. ಅದೆಷ್ಟೋ ಲಕ್ಷಾಂತರ ಭಗವದ್ಭಕ್ತರ ಬಾಳಿಗೆ ಬೆಳಕನ್ನು ನೀಡಿ‌ ಹರಸಿದ ಧರ್ಮಾಧಿಕಾರಿಗಳಾದ ಪೂಜನೀಯ ಡಾ.ವೀರೆಂದ್ರ ಹೆಗ್ಗಡೆಯವರು ನಡೆದಾಡುವ ಮಂಜುನಾಥ ಸ್ವಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಹೇಯ ಕೃತ್ಯ ಕಾಣದ ದುಷ್ಟ ಶಕ್ತಿಗಳಿಂದ ನಡೆಯುತ್ತಿದೆ.
ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಿರಂತರವಾಗಿ ಕೆಲವು ತುಚ್ಚ ಮನಸ್ಸಿನ ಅಂಧರಿಂದ ನಡೆಯುತ್ತಿದೆ.


ಕ್ಷೇತ್ರದ ಅಭಿವೃದ್ಧಿ ಪರ ಕಾರ್ಯಗಳು ಹಾಗೂ ಖಾವಂದರ ಸಮಾಜಮುಖಿ ಕಾರ್ಯ ಚಿಂತನೆಗಳ ವೈಖರಿಯನ್ನು ‌ಕಂಡು ಸಹಿಸದ ಕೆಲ ನೀಚ ಮನಸ್ಸಿನ ವ್ಯಕ್ತಿಗಳು ಅಪ ಪ್ರಚಾರ ಮಾಡಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪೂಜ್ಯ ಖಾವಂದರ ತೇಜೋವಧೆ ಮಾಡಲು ಹೊರಟಿರುವುದಲ್ಲದೆ ಲಕ್ಷಾಂತರ ಭಕ್ತಾದಿಗಳ ನಂಬಿಕೆಗೆ ದ್ರೋಹ ಎಸಗುವ ಕಾರ್ಯಕ್ಕೆ ಮುಂದಾಗಿರುವುದನ್ನು ಸುಳ್ಯ ತಾಲೂಕು ಭಜನಾ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.
ಅಮಾಯಕ ಹೆಣ್ಣು ಮಗಳಹತ್ಯೆಯಾಗಿರುವುದನ್ನುನಾವುಸಹಿಸುವುದಿಲ್ಲ. ಕೃತ್ಯದ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿ ಗಳಿದ್ದರೂ ಕಾನೂನಾತ್ಮಕವಾಗಿ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆಗೊಳಪಡಿಸಬೇಕು. ಕೊಲೆ ಪ್ರಕರಣದ ಕುರಿತು ನ್ಯಾಯುತವಾದ ಹೋರಾಟಕ್ಕೆ ನಾವೂ ಸಂಪೂರ್ಣವಾಗಿ ಬೆಂಬಲಿಸಲು ಬದ್ಧರಿದ್ದೇವೆ.


ದುಷ್ಚಟಮುಕ್ತ ಸುದೃಢ ಸಮಾಜದ ನಿರ್ಮಾಣಕ್ಕಾಗಿ ಮುಂದಿನ ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿಗಳ ಅರಿವಿಗಾಗಿ ಇಡೀ ರಾಜ್ಯದಲ್ಲಿ ಭಜನೆ ಯ ಕ್ರಾಂತಿಯ ಹರಿಕಾರರಾಗಿ ಅದೆಷ್ಟೋ ದೇವಸ್ಥಾನದ ಭಜನಾ ಮಂದಿರ ಶ್ರದ್ಧಾ ಕೇಂದ್ರ ಗಳ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಧರ್ಮದ ರಕ್ಷಣೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡಿರುವ ಪೂಜ್ಯ ಧರ್ಮಾಧಿಕಾರಿಯವರ ವಿರುದ್ಧ ಇದನ್ನೇ ಮುಂದುವರಿಸಿಕೊಂಡು ಹೋದಲ್ಲಿ ನಾವು ಸಹಿಸುವುದಿಲ್ಲ.

ನಮ್ಮ ಭಜನಾ ಪರಿಷತ್ ವತಿಯಿಂದ ಇಡೀ ತಾಲೂಕಿನ ಭಜಕ ಬಾಂಧವರನ್ನು ಒಟ್ಟು ಸೇರಿಸಿಕೊಂಡು ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ.

ಕ್ಷೇತ್ರದ ಹಾಗೂ ಪೂಜ್ಯರ ಬಗ್ಗೆ ಸತ್ಯಕ್ಕೆ ದೂರವಾದ ಆರೋಪ ಮಾಡಿರುವ ವ್ಯಕ್ತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷೇತ್ರದ ಹಾಗೂ ಪೂಜ್ಯರ ಕ್ಷಮೆ ಯಾಚಿಸಬೇಕು.
ಸೌಜನ್ಯ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಕಾರ್ಯದರ್ಶಿ ಸತೀಶ್ ಟಿ.ಎನ್ ಕಲ್ಮಕ್ಕಾರ್,
ದೊಡ್ಡತೋಟ ವಲಯ ಅಧ್ಯಕ್ಷ ವೆಂಕಟ್ರಮಣ ಡಿ.ಜಿ ಉಪಸ್ಥಿತರಿದ್ದರು.