ಬಾಡಿಗೆ ಮನೆಯೊಳಗೆ ಗೋಣಿ ಚೀಲದಲ್ಲಿ ಯುವತಿಯ ಮೃತ ದೇಹ ಪತ್ತೆ ಪ್ರಕರಣ, ನಾಲ್ಕು ತಂಡಗಳಲ್ಲಿ ಮುಂದುವರಿದ ಪೊಲೀಸ್ ತನಿಖೆ ; ಯುವತಿಯ ಗುರುತು ಅಲಭ್ಯ

0

ಸುಳ್ಯದ ಬೀರಮಂಗಲ ಬಾಡಿಗೆ ಮನೆಯೊಳಗೆ ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಭಂದಿಸಿ ಪೊಲೀಸ್ ತನಿಖೆ ಮುಂದುವರಿದಿದ್ದು, ಯುವತಿಯ ಗುರುತು ಪತ್ತೆ ಇದುವರೆಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳ ಮೂಲಕ ತನಿಖೆ ಮುಂದುವರಿದಿದ್ದು, ಆರೋಪಿ ಇಮ್ರಾನ್ ಶೇಕ್ ಪತ್ತೆಗೆ ಹಾಗೂ ಕೊಲೆಗೀಡಾದ ಯುವತಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಘಟನೆಯ ಕುರಿತಂತೆ ಸುಳ್ಯದ ಓಡಬಾಯಿಯಲ್ಲಿರುವ ಲಿಕ್ವಿಡ್ ಕಾಂಟಿನೆಂಟ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕ ಸಂತೋಷ್ ಕೆ. ನೀಡಿದ ಪೊಲೀಸ್ ದೂರಿನಂತೆ,
ಕಳೆದ 8 ತಿಂಗಳಿನಿಂದ ಇಮ್ರಾನ್ ಶೇಕ್ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿದ್ದು, ಬೀರಮಂಗಲ ಎಂಬಲ್ಲಿ ಗುತ್ತಿಗಾರಿನ ಶಿವರಾಮ ಶಾಸ್ತ್ರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲಸಕ್ಕೆ ಸೇರಿದ ಹದಿನೈದು ದಿನಗಳಲ್ಲಿ ತನ್ನ ಊರಾದ ಪಶ್ಚಿಮ ಬಂಗಾಳಕ್ಕೆ ಹೋಗಿ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಬಂದವನು ಬಾರ್ ಇರುವ ಕಾಂಪ್ಲೆಕ್ಸ್ ನಲ್ಲಿಯೇ ರೂಮಿನಲ್ಲಿ ಹೆಂಡತಿ ಜೊತೆ 15 ದಿವಸ ಇದ್ದ. ಆತನ ಹೆಂಡತಿ ಅಂಗವಿಕಲೆಯಾಗಿದ್ದು ಊರುಗೋಲಿನ ಸಹಾಯದಲ್ಲಿ ನಡೆದಾಡುತ್ತಿದ್ದು, ಕಪ್ಪು ಬಣ್ಣದ ಬುರ್ಖಾವನ್ನು ಧರಿಸುತ್ತಿದ್ದಳು. ಬಳಿಕ ಇಮ್ರಾನ್ ಶೇಕ್ ಹೆಂಡತಿ ಜೊತೆ ಮೊದಲಿದ್ದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಬಾರ್‌ ಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ. ತಿಂಗಳ ಹಿಂದೆ ಇಮ್ರಾನ್ ಶೇಕ್ ಬಾರ್ ಮಾಲಕರಲ್ಲಿ ತನ್ನ ಪತ್ನಿ ಗರ್ಭೀಣಿಯಾಗಿದ್ದು ಆಕೆಗೆ ಯಾರೂ ಇಲ್ಲದೇ ಇರುವುದರಿಂದ ತನ್ನ ಊರಿನ ಮನೆಯಲ್ಲಿ ಬಿಟ್ಟು ವಾಪಾಸು ಕೆಲಸಕ್ಕೆ ಬರುವುದಾಗಿ ಹೇಳಿದ್ದು, ನ. 19 ರಂದು ಸಂಬಳ ಪಡೆದು ಹೋಗಿದ್ದ.

ಇಮ್ರಾನ್ ಶೇಕ್‌ನನ್ನು ಹೆಚ್ಚಾಗಿ ಬಾರ್‌ ನಲ್ಲಿ ವೈಟರ್ ಆಗಿ ಕೆಲಸ ಮಾಡುವ ಬೆಟ್ಟಂಪಾಡಿಯ ನಿವಾಸಿ ಕೀರ್ತನ್ ಎಂಬವರು ಅವರ ಬೈಕಿನಲ್ಲಿ ರಾತ್ರಿ ಬಾಡಿಗೆ ಮನೆಗೆ ಬಿಡುತ್ತಿದ್ದರು. ನ.21 ರಂದು ಕೀರ್ತನ್ ಸಂತೋಷ್ ಅವರಲ್ಲಿ, ” ಇಮ್ರಾನ್ ಶೇಕ್ ನ ಬಾಡಿಗೆ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಿರುವ ರೋಹಿತ್‌ರವರು ಇಮ್ರಾನ್‌ನ ಮನೆಯಿಂದ ನ.20ರಂದು ರಾತ್ರಿ 7.30 ಗಂಟೆಗೆ ಜೋರಾಗಿ ಹೆಂಗಸು ಕಿರುಚಿದ ಶಬ್ದ ಕೇಳಿಸಿದ್ದು, ಅವರ ಮನೆಗೆ ಹೋದ ರೋಹಿತ್‌ ಬಾಗಿಲು ತಟ್ಟಿದಾಗ ಅಲ್ಲಿದ್ದ ಇಮ್ರಾನ್ ಶೇಕ್‌ ಹೆಂಡತಿಯು ಶೌಚಾಲಯದಲ್ಲಿ ಬಿದ್ದರು ಎಂದು ಹೇಳಿರುವುದಾಗಿ ತನಗೆ ಹೇಳಿದ್ದರು” ಎಂಬ ಮಾಹಿತಿ ನೀಡಿದರು.

ಈ ವಿಚಾರ ಗೊತ್ತಾದ ಸಂತೋಷ್ ಅವರು ಮಂಗಳವಾರ ಬೆಳಿಗ್ಗೆ ಇಮ್ರಾನ್ ಗೆ ಕರೆ ಮಾಡಿದಾಗ ಸ್ವಿಚ್ ಅಫ್ ಬರುತ್ತಿತ್ತು. ಸಂಜೆ ಕೀರ್ತನ್ ಜೊತೆ ಬೀರಮಂಗಲದ ಇಮ್ರಾನ್ ಶೇಕ್ ನ ಬಾಡಿಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿಕೊಂಡಿದ್ದು, ಕಿಟಕಿ ತೆರೆದಿತ್ತು. ಒಳಗಡೆ ವಿದ್ಯುತ್ ದೀಪ ಉರಿಯುತ್ತಿತ್ತು, ಕಿಟಕಿಯಲ್ಲಿ ನೋಡಿದಾಗ ಮೊಬೈಲ್ ಫೋನ್ ಟೇಬಲ್‌ನ ಮೇಲಿದ್ದು, ಶೌಚಾಲಯದಲ್ಲಿ ಲೈಟ್ ಹಾಕಲಾಗಿತ್ತು, ಅದರೊಳಗೆ ಪ್ಲಾಸ್ಟಿಕ್ ಗೋಣಿ ಚೀಲ ಕಟ್ಟಿ ಇಟ್ಟದ್ದು ಕಂಡು ಬಂದಿದ್ದು, ಅದನ್ನು ನೋಡಿ ಸಂಶಯ ಬಂದು ಸಂತೋಷ್ ರೋಹಿತ್‌ರಲ್ಲಿ ವಿಚಾರಿಸಿದಾಗ ನ.20 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಇಮ್ರಾನ್ ಶೇಕ್ ಮಾತ್ರ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೋಗಿರುವುದನ್ನು ನೋಡಿರುವುದಾಗಿಯೂ ಆತನ ಜೊತೆ ಆತನ ಹೆಂಡತಿ ಹೋಗಿಲ್ಲ ಎಂದೂ ಮಾಹಿತಿ ನೀಡಿದರು.

ಇಮ್ರಾನ್ ಶೇಕ್ ಆತನ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಮನೆಗೆ ಬೀಗ ಹಾಕಿ ಹೋಗಿರುವ ಸಂಶಯದ ಹಿನ್ನೆಲೆಯಲ್ಲಿ ಸಂತೋಷ್ ರವರು, ಸುಳ್ಯ ಪೊಲೀಸ್‌ ಠಾಣೆಗೆ ಬಂದು ಪಿಎಸ್‌ಐರವರಿಗೆ ಮೌಖಿಕವಾಗಿ ಮಾಹಿತಿ ನೀಡಿದರು. ಅದರಂತೆ ಪಿಎಸ್‌ಐ ಇಮ್ರಾನ್‌ ಶೇಕ್‌ ನ ಬಾಡಿಗೆ ಮನೆಗೆ ಹೋಗಿ ಬೀಗ ಒಡೆದು ಪರಿಶೀಲಿಸಿದಾಗ ಈ ಬೀಭತ್ಸ ಕೃತ್ಯ ಬೆಳಕಿಗೆ ಬಂತು.

ಕೊಲೆಗೀಡಾದ ಯುವತಿಯ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯ ಶೈತ್ಯಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.