ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಸಂಪಾಜೆ : ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಕ ಸಾ.ಪ.ಮಡಿಕೇರಿ ತಾಲ್ಲೂಕು,ಇದರ ಆಶ್ರಯದಲ್ಲಿ ಹೋಬಳಿ ಘಟಕ ಸಂಪಾಜೆ ಇದರ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ್ಯೋತಿ ಪ್ರೌಢಶಾಲೆ ಇಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಮಡಿಕೇರಿ ಕ.ಸಾ. ಪ. ಅಧ್ಯಕ್ಷರಾದ ಶ್ರೀ ಅಂಬೇಕಲ್ಲು ನವೀನ್ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಅವರು ನೆರವೇರಿಸಿದರು. ತಮ್ಮ ಭಾಷಣದಲ್ಲಿ ಅವರು”ತಳಮಟ್ಟದ ಸಾಹಿತ್ಯ ಕಾರ್ಯಕ್ರಮವನ್ನು ಹೆಚ್ಚೆಚ್ಚು ನಡೆಸುವುದು ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದವರ ನೆನಪಿಗೆ ದತ್ತಿ ನಿಧಿಯನ್ನು ಸ್ಥಾಪಿಸಬೇಕೆಂದು ಕರೆಕೊಟ್ಟರು ಮತ್ತು ಪದಗ್ರಹಣದ ಸಂಕೇತವಾಗಿ ಪರಿಷತ್ ಧ್ವಜವನ್ನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಾಲ ಪೆರಾಜೆಯವರಿಗೆ ಹಸ್ತಾಂತರಿಸಿದರು. ಮಡಿಕೇರಿ ಕ.ಸಾ.ಪ ಅಧ್ಯಕ್ಷರಾದ ಅಂಬೇಕಲ್ಲು ನವೀನ ಅವರು ಘಟಕದ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಅಧ್ಯಕ್ಷ ಗೋಪಾಲ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸಂಗೀತ ರವಿರಾಜ್ ಮತ್ತು ಜಗದೀಶ ಕುಂಬಳಚೇರಿ ಹಾಗೂ ಕೋಶಾಧಿಕಾರಿ ಶ್ರೀಮತಿ ಟೀನಾ ಸಂಪಾಜೆ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಅಂಬೇಕಲ್ಲು ನವೀನ್ ಅವರು ತಮ್ಮ ಭಾಷಣದಲ್ಲಿ” ಸಂಪಾಜೆ ಘಟಕ ತನ್ನ ವ್ಯಾಪ್ತಿಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸುವ ಮೂಲಕ ಕನ್ನಡ ಸೇವೆ ಮತ್ತು ಕನ್ನಡ ಅಭಿವೃದ್ಧಿಯನ್ನು ಮಾಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ‘ಕನ್ನಡ ಮಾಧ್ಯಮ ಕಲಿಕೆ ಮತ್ತು ಕನ್ನಡ ಶಾಲೆಗಳು’ ಎಂಬ ವಿಷಯದ ಮೇಲೆ ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಚಂದ್ರಶೇಖರ್ ಪೇರಲ್ ಭಾಗವಹಿಸಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಮತ್ತು ಕನ್ನಡ ಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಉಳಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರವಾಗಿ ಚರ್ಚಿಸಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇದರ ರಾಜ್ಯ ನಿರ್ದೇಶಕರಾಗಿರುವ ಡಾ. ಮಾಧವ ಮಂಗಳೂರು ವಿವಿ, ಪೆರಾಜೆ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎನ್.ಎ. ಜ್ಞಾನೇಶ್, ಶಾಲಾ ಸಂಚಾಲಕರಾಗಿರುವ ಹರೀಶ್ ಮುಡ್ಕಜೆ, ಶಾಲಾ ಮುಖ್ಯೋಪಾಧ್ಯಾಯರಾದ ಎಂ ಆರ್ ನರೇಂದ್ರ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಕೆ.ಯು. ರಂಜಿತ್ ಕಾರ್ಯದರ್ಶಿ ಕ.ಸಾ.ಪ.ಮಡಿಕೇರಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ಜಗದೀಶ ಕುಂಬಳಚೇರಿ ಎಲ್ಲರನ್ನು ವಂದಿಸಿದರು.