ಸ್ನೇಹ ಶಾಲೆಯಲ್ಲಿ ಸರ್ವೋದಯ ದಿನಾಚರಣೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮಾತನಾಡಿ “ಗಾಂಧೀಜಿಯವರು ಅಸ್ತಂಗತರಾದ ದಿನವನ್ನು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಶಾಂತಿ, ಅಹಿಂಸೆ ಮತ್ತು ಸತ್ಯಾಗ್ರಹ ತತ್ವಗಳ ಮೂಲಕ ಹೋರಾಡಿದ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆಯುತ್ತಾರಲ್ಲದೆ, ರಾಷ್ಟ್ರಪಿತ ಎಂಬುದಾಗಿ ಗೌರವ ನೀಡಲಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಿದ್ದ ಗಾಂಧೀಜಿ ಗ್ರಾಮಗಳ ಅಭಿವೃದ್ಧಿಯನ್ನು ಸಾಧಿಸಬೇಕೆಂದಿದ್ದರು. ಅವರ ಕನಸನ್ನು ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ. ಸ್ವಚ್ಛ ಭಾರತ ಪರಿಕಲ್ಪನೆಯ ಅನುಷ್ಠಾನಕ್ಕೆ ವಿದ್ಯಾರ್ಥಿಗಳಾದ ನಾವು ಕೊಡುಗೆ ನೀಡಬೇಕು. ಗಾಂಧೀಜಿಯವರು ಅಸಹಕಾರ ಚಳವಳಿಯ ಮೂಲಕ ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದದ ಕಾರಣದಿಂದ ರೈಲಿನಿಂದ ಹೊರದಬ್ಬಲ್ಪಟ್ಟರು. ಅಂತಹ ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದರಲ್ಲದೆ, ರಾಮರಾಜ್ಯದ ಅಸ್ತಿತ್ವವನ್ನು ಬಯಸಿದ್ದರು. ದಂಡಿ ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ, ಚೌರಿಚೌರ ಘಟನೆ, ರೌಲತ್ ಕಾಯ್ದೆಯ ವಿರುದ್ಧದ ಹೋರಾಟ, ರೈತರ ಹೋರಾಟ ಹೀಗೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಜನರನ್ನು ಸಂಘಟಿಸಿದವರು ಗಾಂಧೀಜಿಯವರು. ಜಿನ್ನಾ ರವರ ಬೇಡಿಕೆಯಂತೆ ಭಾರತ ವಿಭಜನೆಗೆ ಸಮ್ಮತಿ ನೀಡಿದ್ದರು. ಭಾರತದ ಸ್ವಾತಂತ್ರ್ಯದ ಬಳಿಕ ನಾಥುರಾಮ್ ಗೋಡ್ಸೆ ಎಂಬವರಿಂದ 1948 ಜನವರಿ 30 ರಂದು ಹತರಾದರು. ಅವರ ಕೊಡುಗೆಗಳನ್ನು ಸ್ಮರಿಸೋಣ, ಅಳವಡಿಸಿಕೊಳ್ಳೋಣ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.