ನಿತೀಶ್ ಹೋಟೆಲ್ ಸಿಬ್ಬಂದಿ ಯೋಗೀಶ್ ನಿಧನ

0

ಸುಳ್ಯದ ಬಾಳೆಮಕ್ಕಿಯಲ್ಲಿರುವ ನಿತೀಶ್ ಹೋಟೆಲ್ ಸಿಬ್ಬಂದಿ ಯೋಗೀಶ್ ಅವರು ಮೆದುಳಿನ ರಕ್ತಸ್ರಾವದಿಂದಾಗಿ ಮಾ.12ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.


ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡುರಸ್ತೆಯವರಾದ ಯೋಗೀಶ್ ಅವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಯದಲ್ಲಿ ಬಾಡಿಗೆ ರೂಂನಲ್ಲಿ ನೆಲೆಸಿ, ನಿತೀಶ್ ಹೋಟೆಲ್ ನಲ್ಲಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.


ಮಾ.10ರಂದು ಬೆಳಿಗ್ಗೆ ತಲೆ ತಿರುಗುವ ಹಿನ್ನೆಲೆಯಲ್ಲಿ ಬಾಳೆಮಕ್ಕಿಯಲ್ಲಿರುವ ಸಿಟಿ ಮೆಡಿಕಲ್ ಗೆ ಔಷಧಿಗೆಂದು ತೆರಳಿದ್ದರೆನ್ನಲಾಗಿದೆ. ಅಲ್ಲಿ ತಲೆತಿರುಗಿ ಬಿದ್ದ ಅವರನ್ನು ಸ್ಥಳೀಯರು ಹಾಗೂ ಹೋಟೆಲ್ ಸಿಬ್ಬಂದಿಗಳು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಮನೆಯವರಿಗೆ ವಿಷಯ ತಿಳಿಸಲಾಯಿತು.


ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಯೋಗೀಶ್ ಅವರಿಗೆ ಮೆದುಳಿನ ರಕ್ತಸ್ರಾವ ಆಗಿರುವುದಾಗಿ ತಿಳಿಸಿದರೆನ್ನಲಾಗಿದೆ. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಾ.12ರಂದು ಬೆಳಿಗ್ಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.


ಮೃತರು ಪತ್ನಿ , ಒಂದು ಗಂಡು ಹಾಗೂ ಮೂರು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.