ಈ ಬಾರಿ ಬಿಜೆಪಿಯಿಂದ ವಿನೂತನ ಕ್ರಮ
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 128 ಮಂದಿಗೆ ಮತದಾನದ ಅವಕಾಶ
ಅಭ್ಯರ್ಥಿಗಳ ಆಯ್ಕೆಗೆ 4 ಹಂತಗಳ ಪ್ರಕ್ರಿಯೆ
ಪ್ರಸಕ್ತ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ವಿನೂತನ ಕ್ರಮ ಜಾರಿಗೊಳಿಸಿದ್ದು ಅದರಂತೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲು ಚುನಾವಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪೈಕಿ ಮಂಗಳೂರಿನ ಸಂಘನಿಕೇತನದಲ್ಲಿ ಈ ಮತದಾನ ನಡೆಯಲಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 128 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದು ಅವರೆಲ್ಲ ಮಂಗಳೂರಿಗೆ ತೆರಳಿದ್ದಾರೆ.
ಬಿಜೆಪಿ ಮಂಡಲ ಸಮಿತಿ ಪದಾಧಿಕಾರಿಗಳು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ ಪದಾಧಿಕಾರಿಗಳು, ಪ್ರಕೋಷ್ಠ, ಮೋರ್ಚಾಗಳ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಚುನಾವಣಾ ಪ್ರಭಾರಿ, ವಿಸ್ತಾರಕರು, ಮಂಡಲ ಮೋರ್ಛಾ ಅಧ್ಯಕ್ಷರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಮಾಜಿ ಜಿ.ಪಂ.ಸದಸ್ಯರು, ಮಾಜಿ ತಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ನಗರ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಶಕ್ತಿ ಕೇಂದ್ರಗಳ ಪ್ರಮುಖರು ಈ ಓಟಿಂಗ್ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು ಸುಳ್ಯ ಕ್ಷೇತ್ರದಲ್ಲಿ ಇವರೆಲ್ಲ ಸೇರಿ 128 ಮಂದಿ ಇದ್ದಾರೆ. ಇವರೆಲ್ಲ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ.
ಬಳಿಕ ಎಪ್ರಿಲ್ 1 ಮತ್ತು 2 ರಂದು ಎರಡು ದಿನ ಎಲ್ಲ ಜಿಲ್ಲಾ ಘಟಕಗಳ ಕೋರ್ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ಆಗಮಿಸಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ.
ಬಳಿಕ ಎರಡು ದಿನ ಬೆಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆದು ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದೆ.
ಅಂತಿಮವಾಗಿ ರಾಜ್ಯ ಪ್ರಮುಖರಿಗೆ ಅಭಿಪ್ರಾಯ ಸಲ್ಲಿಕೆಯಾಗಿ ಎ.4ರ ಬಳಿಕ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ.
ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಒಂದೊಂದು ಜಿಲ್ಲೆಗೆ ಸಚಿವರು ಹಾಗೂ ಮಾಜಿ ಸಚಿವರನ್ನು ಒಳಗೊಂಡ ಹಿರಿಯ ನಾಯಕರ ನೇತೃತ್ವದ ಸಮಿತಿಗಳನ್ನು ರಚಿಸಿದ್ದು, ಆ ಎಲ್ಲ ಸಮಿತಿಗಳ ನಾಯಕರು ಜಿಲ್ಲಾ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದ ಮುಖಂಡರ ಪ್ರತ್ಯೇಕ ಸಭೆ ನಡೆಸಿ, ಮತದಾನ ಪ್ರಕ್ರಿಯೆ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.