ಅರಂತೋಡು : ಇಳಿಜಾರಿನಲ್ಲಿ ವೇಗದ ಚಾಲನೆ

0


ಯುವಕನಿಂದ ಚಾಲಕನಿಗೆ ಆಕ್ಷೇಪಣೆ


ಪರಸ್ಪರ ಹೊಡೆದಾಟ, ಆಸ್ಪತ್ರೆಗೆ ದಾಖಲು

ಇಳಿಜಾರಿನಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿ ಕೆಲವು ಯುವಕರು ಲೈನ್‌ಸೇಲ್‌ನ ವಾಹನದ ಚಾಲಕನನ್ನು ತರಾಟೆಗೆತ್ತಿಕೊಂಡು ಅವರ ಮಧ್ಯೆ ಹೊಕೈ ನಡೆದ ಹಾಗೂ ಸುಳ್ಯದಿಂದ ಅರಂತೋಡಿಗೆ ಧಾವಿಸಿದ ಲೈನ್‌ಸೇಲ್ ವಾಹನದ ಚಾಲಕನ ಗೆಳೆಯರು, ಅರಂತೋಡಿನ ಯುವಕರ ಮೇಲೆ ಹಲಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಎರಡೂ ತಂಡದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಇಂದು ಅರಂತೋಡು ವೈಎಂಕೆ ಬಳಿ ಮರ್ಕಂಜ ತಿರುವಿನಲ್ಲಿ ಬೆಂಗಳೂರು ಕಡೆಯ ವಾಹನವೊಂದು ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿತ್ತೆಂದೂ, ಅಲ್ಲಿ ಜನ ನಿಂತಿದ್ದಾಗ ಅಡ್ತಲೆ ಕಡೆಯಿಂದ ಬಂದ ಲೈನ್‌ಸೇಲ್‌ನ ಇಕೋ ವಾಹನವೊಂದು ವೇಗವಾಗಿ ಬಂದು ಅಲ್ಲಿ ಸೇರಿದ್ದ ಯುವಕರು ಪ್ರಶ್ನಿಸಿದರೆಂದು ತಿಳಿದು ಬಂದಿದೆ. ಸರ್ಫುದ್ದೀನ್ ಮತ್ತು ಮುನೀರ್ ಎಂಬವರು ಲೈನ್‌ಸೇಲ್‌ನ ವಾಹನದ ಚಾಲಕ ಸುಳ್ಯದ ಹಳೆಗೇಟ್‌ನ ಆಸೀಫ್ ಎಂಬವರನ್ನು ತರಾಟೆಗೆತ್ತಿಕೊಂಡಾಗ ಅವರ ನಡುವೆ ಹೊಕೈ ನಡೆದಿತ್ತೆನ್ನಲಾಗಿದೆ.


ಇದರಿಂದ ವ್ಯಗ್ರಗೊಂಡ ಆಸಿಫ್ ಸುಳ್ಯದ ತನ್ನ ಗೆಳೆಯರಿಗೆ ತಿಳಿಸಿ ಅವರು ಮೂರ್‍ನಾಲ್ಕು ಮಂದಿ ಅರಂತೋಡಿಗೆ ಧಾವಿಸಿ ಅರಂತೋಡು ಮಸೀದಿ ಎದುರುಗಡೆಯ ಕ್ಯಾಂಟೀನ್‌ನಲ್ಲಿದ್ದ ಸರ್ಫುದ್ದೀನ್‌ರಿಗೆ ಹಲ್ಲೆ ನಡೆಸಿದರೆಂದು ತಿಳಿದುಬಂದಿದೆ.
ಮೂಗಿಗೆ ಏಟಾಗಿರುವ ಸರ್ಫುದ್ದೀನ್ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರೆ, ಕಿವಿಯ ಭಾಗಕ್ಕೆ ಏಟಾಗಿರುವ ಆಸಿಫ್ ಕೆವಿಜಿ ಆಸ್ಪತ್ರೆಗೆ ಹೋಗಿದ್ದಾರೆ.

ನಾನು ವೇಗವಾಗಿ ಇರಲಿಲ್ಲ. ಆದರೂ ಹೊಡೆದಿದ್ದಾರೆ : ಆಸಿಫ್
ನಾನು ಅಡ್ತಲೆ ಕಡೆಯಿಂದ ಇಳಿಜಾರಿನಲ್ಲಿ ಬರುವಾಗ ವೇಗವಾಗಿ ವಾಹನ ಚಲಾಯಿಸಿದನೆಂಬ ಕಾರಣ ನೀಡಿ ನನ್ನನ್ನು ತರಾಟೆಗೆತ್ತಿಕೊಂಡು ಹಲ್ಲೆ ನಡೆಸಿದ್ದಾರೆ. ನಾನು ನಿಜವಾಗಿ ಅಷ್ಟೊಂದು ಸ್ಪೀಡ್‌ನಲ್ಲಿ ಇರಲಿಲ್ಲ. ದೂರದಲ್ಲಿ ವಾಹನ ನಿಲ್ಲಿಸಿ ಚರಂಡಿಗೆ ಇಳಿದಿದ್ದ ವಾಹನವನ್ನು ನೋಡಲು ಹೋಗಿದ್ದೆ. ಆಗ ನನ್ನನ್ನು ತರಾಟೆಗೆತ್ತಿಕೊಂಡರು. ಅದಲ್ಲದೆ ನಾನು ಅಲ್ಲಿಂದ ಹಿಂತಿರುಗಿ ಬರುವಾಗ ನನ್ನ ವಾಹನಕ್ಕೆ ಕಲ್ಲು ಹೊಡೆದು ಜಖಂಗೊಳಿಸಿದ್ದಾರೆ. ಅದರ ನಷ್ಟ ಕೇಳಲೆಂದು ಅರಂತೋಡಿಗೆ ಮತ್ತೆ ಹೋದಾಗ ಹೊಡೆದಾಟವಾಗಿದೆ ಎಂದು ಹಳೇಗೇಟ್‌ನ ಆಸಿಫ್ ತಿಳಿಸಿದ್ದಾರೆ.


ಅರಂತೋಡಿನ ಸರ್ಫುದ್ದೀನ್‌ರನ್ನು ಸಂಪರ್ಕಿಸಿದಾಗ ಅಡ್ತಲೆ ಕಡೆಯಿಂದ ಬರುವ ರಸ್ತೆಯ ಇಳಿಜಾರಿನಲ್ಲಿ ಅತಿ ವೇಗದಿಂದ ವಾಹನ ಬಂದಿತ್ತು. ಅದಕ್ಕಾಗಿ ನಾವು ಬುದ್ದಿ ಹೇಳಿದ್ದೇವೆ ಅಷ್ಟೇ. ಹೊಡೆದಿಲ್ಲ. ಆದರೆ ಲೈನ್‌ಸೇಲ್‌ನ ವಾಹನದ ಚಾಲಕ ಸುಳ್ಯಕ್ಕೆ ಹೋಗಿ ಜನ ಕರೆದುಕೊಂಡು ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.