ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ‌ ಮ್ಯಾನೇಜರ್ ಪ್ರೀತಂ ಗೌಡ ಕೆರೆಗೆ ಹಾರಿ ಆತ್ಮಹತ್ಯೆ

0

ಸುಳ್ಯದಲ್ಲಿ ಸಹಕಾರಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಪಟ್ಟೆ ನಿವಾಸಿಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.3 ರಂದು ವರದಿಯಾಗಿದೆ.

ಪುತ್ತೂರಿನ ಬಡಗನ್ನೂರು ಗ್ರಾಮದ ಪಟ್ಟೆ ಆನಂದ ಗೌಡ ಎಂಬವರ ಮಗ ಪ್ರೀತಂ ಎನ್.(೨೬ವ.)ಆತ್ಮಹತ್ಯೆ ಮಾಡಿಕೊಂಡವರು. ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ಪ್ರೀತಂ ಅವರು ದ.೨ ರಂದು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಿದ್ದರು.


ಮನೆಯಲ್ಲಿ ಎಲ್ಲರೂ ಊಟ ಮಾಡಿ ರಾತ್ರಿ ಮಲಗಿದ್ದರು.
ನಾಳೆ ಮೂಡಬಿದರೆಯಲ್ಲಿ ತರಬೇತಿ ಇದ್ದು ಬೇಗ ಎಬ್ಬಿಸುವಂತೆ ತಾಯಿಗೆ ತಿಳಿಸಿ ಪ್ರೀತಂ ಅವರ ಕೋಣೆಯಲ್ಲಿ ಮಲಗಿದ್ದರು.


ಮರುದಿನ ಬೆಳಿಗ್ಗೆ ಮಗ ಪ್ರೀತಮ್ ಅವರನ್ನು ಎಬ್ಬಿಸಲೆಂದು ತಾಯಿ ಆತ ಮಲಗಿದ್ದ ಕೋಣೆಗೆ ಹೋದಾಗ ಅಲ್ಲಿ ಪ್ರೀತಂ ಅವರು ಇರಲಿಲ್ಲ.ಆತಂಕಗೊಂಡ ಅವರು ಮನೆಯ ಸುತ್ತಮುತ್ತ ಹುಡುಕಾಡಿ ನಂತರ ಮನೆಯ ಅಂಗಳದ ಬಾವಿ ಬಳಿ ಪ್ರೀತಂ ಅವರ ಚಪ್ಪಲಿ ಮತ್ತು ಮೊಬೈಲ್‌ಫೋನ್ ಕಂಡು ಬಂದಿತ್ತು.ಬಾವಿಯಲ್ಲಿ ನೋಡಿದಾಗ ಏನೂ ಕಾಣದೇ ಇದ್ದುದರಿಂದ ಅವರು ನೆರೆ ಮನೆಯ ವಿಠಲ ಸಾಲ್ಯಾನ್ ಅವರನ್ನು ಕರೆದು ಬಳಿಕ ಪುತ್ತೂರು ಅಗ್ನಿ ಶಾಮಕದವರಿಗೆ ಕರೆ ಮಾಡಿ ವಿಷಯ ತಿಳಿಸಿದರು.ಅವರು ಬಂದು ಬಾವಿಗಿಳಿದು ನೋಡಿದಾಗ ಪ್ರೀತಂ ಅವರ ಮೃತ ದೇಹ ಪತ್ತೆಯಾಗಿತ್ತು.ಪ್ರೀತಂ ಅವರು ಯಾವುದೋ ಕಾರಣಕ್ಕೆ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ರಿ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲ ಎಂದು ಮೃತರ ತಂದೆ ಆನಂದ ಗೌಡ ಅವರು ನೀಡಿರುವ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಅವಿವಾಹಿತರಾಗಿದ್ದು ತಂದೆ,ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.