ಕುಡಿಯುವ ನೀರಿನ ಸಮಸ್ಯೆ – ಕಲ್ಲುಗುಂಡಿ ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ ಕುರಿತು ವಿಸ್ತೃತ ಚರ್ಚೆ

0

ಸಂಪಾಜೆ ದ್ವಿತೀಯ ಹಂತದ ಗ್ರಾಮಸಭೆ

ಸಂಪಾಜೆ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರ ಅಧ್ಯಕ್ಷತೆಯಲ್ಲಿ ಫೆ.19ರಂದು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಶ್ರೀಮತಿ ಸರಿತಾ ಡಿಸೋಜಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ಪಂಚಾಯತ್ ತೆರಿಗೆ ಕುಡಿಯುವ ನೀರು, ಲೈಸೆನ್ಸ್ ಸಮಯಕ್ಕೆ ಸರಿಯಾಗಿ ಪಾವತಿಮಾಡಿ ಸಹಕರಿಸುವಂತೆ ಹಾಗೂ ಗ್ರಾಮದ ಅಭಿವೃದಿಯಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.


ಕಾರ್ಯದರ್ಶಿ ಪದ್ಮಾವತಿ ಅವರು ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
ಸಭೆಯಲ್ಲಿ ಅನುಪಾಲನ ವರದಿ ಓದಿ ತಿಳಿಸಲಾಯಿತು. ಬಳಿಕ ವರದಿ ಮೇಲಿನ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೆರಿಗೆ ವಸೂಲಿ ಕಡಿಮೆಯಾಗಿದೆ. ಖರ್ಚು ಜಾಸ್ತಿ ಆಗಿದೆ ಕುಡಿಯುವ ನೀರಿನ ಬಿಲ್ ಯಾಕೆ ಇಷ್ಟೊಂದು ಬಾಕಿಯಾಗಿದೆ . ಕುಡಿಯುವ ನೀರಿನ ಬಗ್ಗೆ ಹೆಚ್ಚು ನಿಗಾ ವಹಿಸಿ ನೀರು ಬಿಲ್ಲು ಪಾವತಿ ಮಾಡದವರ ಮೀಟರ್ ಸಂಪರ್ಕ ಕಡಿತ ಗೊಳಿಸುವ ಬಗ್ಗೆ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ದರ್ಖಾಸ್ ಹಾಗೂ ಕಡೆಪಾಲ ಬಳಿ ಕುಡಿಯುವ ನೀರಿನ ಟ್ಯಾಂಕ್ ರಚನೆ, ಗ್ರಾಮದ ರಸ್ತೆ ಚರಂಡಿ ರಚನೆ, ಬೀದಿ ದೀಪ ಅಳವಡಿಕೆ ಕುರಿತು ಗ್ರಾಮಸ್ಥರು ಚರ್ಚಿಸಿದರು.

ದರ್ಖಾಸ್ ಬಳಿ ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ ವಿದ್ಯುತ್ ತಂತಿ ಬದಲಾವಣೆ, ಪ -ಜಾತಿ ಕಾಲನಿಯಲ್ಲಿ ವಿದ್ಯುತ್ ತಂತಿ ಬದಲಾವಣೆ, ದರ್ಖಾಸ್ ಕುಡಿಯುವ ನೀರಿನ ಸಮಸ್ಯೆ, ಜನತಾ ಕಾಲನಿಯ ಬಾಲಕೃಷ್ಣ ಅವರ ಮನೆಗೆ ಕುಡಿಯುವ ನೀರಿನ ಸಮಸ್ಯೆ, ಆನೆ ಹಾವಳಿ, ಗೂನಡ್ಕ ಶಾರದಾ ಅನುದಾನಿತ ಶಾಲಾ ಬಳಿ ಇರುವ ವಿದ್ಯುತ್ ತಂತಿ ಬದಲಾವಣೆ ಕುರಿತಂತೆ ಗ್ರಾಮಸ್ಥರು ಸಲಹೆ ನೀಡಿದರು.

ಕಲ್ಲುಗುಂಡಿ ಆರ್. ಎಂ. ಎಸ್. ಎ ಹೈಸ್ಕೂಲ್ ಆರಂಭ ಆಗಿ ಹತ್ತು ವರ್ಷ ಕಳೆದರೂ ಸ್ವತಃ ಕಟ್ಟಡ ಇಲ್ಲ. ಶಾಲೆಯಲ್ಲಿ ಅಧ್ಯಾಪಕರ ಕೊರತೆ, ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ, ಪೆರುಂಗೋಡಿ ಪೇರಡ್ಕ ರಸ್ತೆಯಲ್ಲಿ ಉಬ್ಬು ತಗ್ಗಿಸುವಿಕೆ ಕುರಿತು ಚರ್ಚೆ ನಡೆಯಿತು.

ಕೃಷಿ ತೋಟಗಾರಿಕೆ ಇಲಾಖೆಯ ಸವಲತ್ತುಗಳ ಮಾಹಿತಿ, ಅರಣ್ಯ, ಕಂದಾಯ, ಅಬಕಾರಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್, ಪಶುಸಂಗೋಪನೆ , ಅಂಚೆ, ಕೆನರಾ ಬ್ಯಾಂಕ್, ಪೊಲೀಸ್, ಶಿಕ್ಷಣ, ದೇವರಾಜ ಅರಸ್ ಹಿಂದುಳಿದ ವರ್ಗಗಳ ಇಲಾಖೆ , ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ , ಅರೋಗ್ಯ ಇಲಾಖೆ, ಮೆಸ್ಕಾಂ ,ನರೇಗಾ ಯೋಜನೆ ಹೀಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನಾ ನೋಡೆಲ್ ಅದಿಕಾರಿಯಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರು, ಕಲ್ಲುಗುಂಡಿ ಪೇಟೆಯಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ಚರ್ಚೆ ನಡೆಯಿತು. ತೆರಿಗೆ ಪರಿಷ್ಕರಣೆ, ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಬಗ್ಗೆ ಚರ್ಚೆ ನಡೆಯಿತು ಚರ್ಚೆಯಲ್ಲಿ ಗಣಪತಿ ಭಟ್, ಕಿಶೋರ್, ಹಸೈನಾರ್ ಕೇಶವ ಬಂಗ್ಲೆಗುಡ್ಡೆ ವಿಜಯ ಆಲಡ್ಕ ಮಹಮ್ಮದ್ ಕುಂಞ, ನಾಗೇಶ್ ಪಿ. ಆರ್, ರಾಜೇಶ್, ಸವಿತಾ ರೈ, ಪುಷ್ಪರಾಜ್ ಗಾಂಭೀರ, ಜಯಂತಿ, ಕಾಂತಿ, ಭಾಗವಹಿಸಿದರು. ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಆಶಾ, ಅಂಗನವಾಡಿ, ಅರೋಗ್ಯ, ಕಾರ್ಯಕರ್ತರು, ಶಾಲಾ ಮುಖ್ಯ ಗುರುಗಳು, ಪಂಚಾಯತ್ ಸಿಬ್ಬಂದಿಗಳು, ಕುಡಿಯುವ ನೀರಿನ ಪಂಪ್ ಆಪರೇಟರ್ ಗಳು ಹಾಜರಿದ್ದರು.

ವೇದಿಕೆಯಲ್ಲಿ ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಜಿ. ಕೆ. ಹಮೀದ್ ಗೂನಡ್ಕ , ಜಗದೀಶ್ ರೈ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಅನುಪಮಾ, ಶೌವಾದ್, ರಜನಿ, ಸುಶೀಲ, ವಿಜಯ ಕುಮಾರ್ ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.
ಗ್ರಾ.ಪಂ. ಸದಸ್ಯ ಜಗದೀಶ್ ರೈ ವಂದಿಸಿದರು. ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.