ಬೆಳ್ಳಾರೆ : ಅಟೋರಿಕ್ಷಾ ತಂಗುದಾಣ ಲೋಕಾರ್ಪಣೆ

0

ದ.ಕ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ : ಸಂಸದ ನಳಿನ್

ಸಚಿನ್ ರೈ ಪೂವಾಜೆ ಸಹಿತ ಹಲವರಿಗೆ ಗೌರವಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ದ.ಕ.ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಕಳೆದ ಹದಿನೈದು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನಿರ್ಮಿಸಿದ ಅಟೋರಿಕ್ಷಾ ತಂಗುದಾಣವನ್ನು ಮಾ.8 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಸಂಸದನಾಗಿದ್ದ ಮೊದಲ ಅವಧಿಯಲ್ಲಿ 4 ಸಾವಿರ ಕೋಟಿ ರೂ., ಪ್ರಧಾನಿ ಮೋದಿ ಆಡಳಿತದ ಉಳಿದ ಎರಡು ಅವಧಿಯಲ್ಲಿ 1 ಲಕ್ಷ ಕೋ.ರೂ. ಅನುದಾನಗಳು ಜಿಲ್ಲೆಗೆ ಬಂದಿದೆ. ಇದನ್ನು ಅಂಕಿ ಅಂಶ ಸಹಿತ ಜನರ ಮುಂದಿಡಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಹೀಗೆ ಜಿಲ್ಲೆಯ ಭವಿಷ್ಯದ ಹಿತ ದೃಷ್ಟಿಗೆ ಪೂರಕವಾಗಿ ಹತ್ತಾರು ಯೋಜನೆಗಳನ್ನು ಅನುಷ್ಟಾನಿಸಲಾಗಿದೆ ಎಂದರು.

ಆದರ್ಶ ಗ್ರಾಮಕ್ಕೆ 60 ಕೋ.ರೂ.
ದೇಶದಲ್ಲಿ ಆದರ್ಶ ಗ್ರಾಮವೊಂದಕ್ಕೆ ಅತಿ ಹೆಚ್ಚಿನ ಅನುದಾನವನ್ನು ಒದಗಿಸಿದ್ದು ಅದು ಬಳ್ಪ ಗ್ರಾಮಕ್ಕೆ. ಇಲ್ಲಿ ಸುಮಾರು 60 ಕೋ.ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಷ್ಟೆಲ್ಲಾ ಕೆಲಸ ಕಾರ್ಯ ನಡೆದರೂ ಟೀಕೆಗಳು ಬರುತ್ತವೆ. ರಾಜಕಾರಣದಲ್ಲಿ ಟೀಕೆಗಳು ಸಹಜ ಎಂದು ಸ್ವೀಕರಿಸಿದ್ದೇನೆ. ಜಿಲ್ಲೆಗೋಸ್ಕರ ನಾನು ಮಾಡಬೇಕಾದ ಕೆಲಸವನ್ನು ಮಾಡಿದ್ದೇನೆ ಎಂದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬೆಳ್ಳಾರೆಯ ಅಟೋ ರಿಕ್ಷಾ ಚಾಲಕರ ತಂಡ ಉತ್ತಮ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ತನ್ನ ಇರುವಿಕೆಯನ್ನು ತೋರ್ಪಡಿಸಿದೆ. ಸಂಸದರ ಅನುದಾನದಲ್ಲಿ ಸುಸಜ್ಜಿತ ಅಟೋ ತಂಗುದಾನ ನಿರ್ಮಾಣವಾಗಿದೆ. ಇನ್ನೂ ಕೆಲ ದಿನಗಳಲ್ಲಿ ಬೆಳ್ಳಾರೆ ತಡಗಜೆ ಸಂಪರ್ಕ ರಸ್ತೆ 20 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದರು.

ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬೆಳ್ಳಾರೆ ಗ್ರಾ.ಪಂ.ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ, ಗ್ರಾ.ಪಂ.ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ವಿಠಲದಾಸ್ ಎನ್‍ಎಸ್‍ಡಿ, ದಿನೇಶ್ ಹೆಗ್ಡೆ, ಜಯಶ್ರೀ ಪಡ್ಪು, ಶ್ವೇತಾ ನೆಟ್ಟಾರು, ಗುತ್ತಿಗೆದಾರ ಮಾಧವ ಮಾವೆ, ಬೆಳ್ಳಾರೆ ಮೇಲಿನ ಪೇಟೆ ಅಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹರೀಶ್ ಕಲ್ಲಪಣೆ ಮೊದಲಾದವರಿದ್ದರು.

ಗೌರವಾರ್ಪಣೆ
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಭಾಗೀರಥಿ, ಅಟೋ ನಿಲ್ದಾಣದ ಅನುದಾನಕ್ಕೆ ಶ್ರಮಿಸಿದ ಸಚಿನ್ ರೈ ಪೂವಾಜೆ, ಗುತ್ತಿಗೆದಾರ ಮಾಧವ ಮಾವೆ, ಸಾಮಾಜಿಕ ಸೇವೆಗಾಗಿ ಕೊರಗಪ್ಪ ಪಾಟಾಜೆ, ಸೀತಾರಾಮ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಯಶಸ್ವಿ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.