ಲೋಕಸಭಾ ಚುನಾವಣೆ ಹಿನ್ನಲೆ : ಶಸ್ತ್ರಾಸ್ತ್ರಗಳ ಠೇವಣಿ ಇರಿಸಲು ಆದೇಶ

0

2024ರ ಏ.26 ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಆಯುಧ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು 2024ರ ಏ.1 ರೊಳಗೆ ಠೇವಣಿ ಇರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ (ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಎಲ್ಲಾ ಬೆಳೆ ರಕ್ಷಣೆಗಾಗಿ ಮತ್ತು ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಚುನಾವಣಾ ಅವಧಿಯಲ್ಲಿ ಠೇವಣಿಯಲ್ಲಿರಿಸಲು ಆದೇಶ ಹೊರಡಿಸಿದ್ದಾರೆ.ಈ ಆದೇಶದಂತೆ ಆತ್ಮ ರಕ್ಷಣೆಗಾಗಿ ಮತ್ತು ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ರಿವಾಲ್ವರ್ / ಪಿಸ್ತೂಲ್ / ಎಸ್.ಬಿ.ಬಿ.ಎಲ್/ ಡಿ.ಬಿ.ಬಿ.ಎಲ್/ ಎಸ್.ಬಿ.ಎಂ.ಎಲ್/ ಡಿ.ಬಿ.ಎಂ.ಎಲ್/ ಎನ್.ಪಿ.ಬಿ ರೈಫಲ್) ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲೆಯಲ್ಲಿನ ನಮೂನೆ ನಂಬ್ರ 8 ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ದಿನಾಂಕ:01-04-2024 ರ ಮೊದಲು ಠೇವಣಿ ಇಡುವುದು.ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ (ದಿನಾಂಕ :11-06-2024) ರಿಂದ ಶಸ್ತ್ರಾಸ್ತ್ರ ಠೇವಣಿ ಇಡಲಾದ ಪೊಲೀಸ್ ಠಾಣೆ / ಡೀಲರ್ ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.