ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಫೇಸ್ ಬುಕ್ ನಲ್ಲಿ ಕೀಳು ಬರಹ

0

ಸುಳ್ಯದ ಯುವಕನ ಮನೆಗೆ ಬಂದು ಡಿಲೀಟ್ ಮಾಡಲು ಒತ್ತಾಯಿಸಿದ ಶಾಸಕರ ಅಭಿಮಾನಿ ಬಳಗ

ಡಿವೈಎಸ್ಪಿ ನೇತೃತ್ವದಲ್ಲಿ ಎರಡು ತಂಡದವರ ವಿಚಾರಣೆ; ರಾಜಿಯಲ್ಲಿ ಇತ್ಯರ್ಥ

ಸುಳ್ಯದ ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಕುರಿತು ಕೀಳು ಮಟ್ಟದ ಮತ್ತು‌ ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ನಿನ್ನೆ ರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಜಯನಗರದ ಪ್ರಮೀತ್ ರವರ ಮನೆಗೆ ಬಂದು ಫೇಸ್ಬುಕ್ಕಿನಲ್ಲಿ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ತಂಡದವರನ್ನು ಸುಳ್ಯ ಠಾಣೆಗೆ ಕರೆದೊಯ್ದು, ಬಳಿಕ ಡಿ ವೈ ಎಸ್ ಪಿ ಯವರ ಆಗಮನದ ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡ ಘಟನೆ ನಡೆದಿದೆ.

ಪ್ರಮೀತ್ ತಮ್ಮ ಫೇಸ್ಬುಕ್ ನಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ಬರಹವನ್ನು ನೋಡಿದ ಶಾಸಕರ ಅಭಿಮಾನಿ ಬಳಗದ ಯುವಕರು, ಪ್ರಮಿತ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮೀತ್ ಅವರು ನಾನು ಅದನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೇಳಿರುವುದಾಗಿಯೂ ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ಪ್ರಮಿತ್ ರವರು ಆ ಯುವಕರನ್ನು ಧೈರ್ಯವಿದ್ದರೆ ಸುಳ್ಯದ ಜಯನಗರಕ್ಕೆ ಬರಲು ಹೇಳಿದ್ದಾರೆಂದೂ, ಬಳಿಕ ಪುತ್ತೂರಿನ ಸುಮಾರು 15ಕ್ಕೂ ಹೆಚ್ಚು ಮಂದಿ ಇದ್ದ ತಂಡವೊಂದು ಜಯನಗರದ ಪ್ರಮೀತ್ ರವರ ಮನೆಯನ್ನು ಹುಡುಕಿ ಜಯನಗರಕ್ಕೆ ಬಂದರೆನ್ನಲಾಗಿದೆ. ಕೂಡಲೇ ನಮ್ಮ ನಾಯಕರಾದ ಅಶೋಕ್ ರೈ ಅವರ ಬಳಿ ಕ್ಷಮೆ ಯಾಚಿಸಬೇಕು ಮತ್ತು ಫೇಸ್ಬುಕ್ಕಿನಲ್ಲಿ ಹಾಕಿರುವಂತಹ ಪೋಸ್ಟರ್ ಅನ್ನು ಡಿಲೀಟ್ ಮಾಡಬೇಕು ಎಂದು ಯುವಕರು ಹೇಳಿದಾಗ, ಪ್ರಮೀತ್ ರವರು ಅದನ್ನು ಒಪ್ಪಲಿಲ್ಲವೆನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಘಟನೆ ತಿಳಿದ ಸ್ಥಳೀಯ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು.
ಈ ವೇಳೆ ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ಶಾಹಿದ್ ಅಫ್ರಿದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಜನರ ಗುಂಪನ್ನು ಚದುರಿಸಿ ಪುತ್ತೂರಿನಿಂದ ಬಂದಿದ್ದ ಯುವಕರನ್ನು ಮತ್ತು ಪ್ರಮೀತ್ ರವರನ್ನು ಸುಳ್ಯ ಠಾಣೆಗೆ ಕರೆದೊಯ್ದರು.
ಘಟನೆಯ ವಿವರವನ್ನು ಪಡೆದಿದ್ದ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ರವರು ಕೂಡಲೇ ಸುಳ್ಯ ಠಾಣೆಗೆ ಬಂದಿದ್ದು ಎರಡು ತಂಡದವರನ್ನು ವಿಚಾರಣೆ ನಡೆಸಿದ್ದು,
ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿ ಕೊಂಡಿರುವುದಾಗಿ ತಿಳಿದುಬಂದಿದೆ. ಪ್ರಮಿತ್ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ಮಾತುಕತೆಯ ಸಂದರ್ಭ ಸುಳ್ಯದ ಕೆಲವು ನಾಯಕರು ಕೂಡಾ ಉಪಸ್ಥಿತರಿದ್ದರು.