ನಾನು ಲಂಚ ಮುಟ್ಟುವುದಿಲ್ಲ – ಅಧಿಕಾರಿಗಳು ಲಂಚ ಪಡೆಯದೇ ಕೆಲಸ ಮಾಡಬೇಕು

0


ಹಣ ಪಡೆದರೆಂಬ ದೂರು ಬರಬಾರದು : ಶಾಸಕಿ ಭಾಗೀರಥಿ ಮುರುಳ್ಯ ಖಡಕ್ ಸೂಚನೆ

ಶಾಸಕರಾದ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮೊದಲ ಸಭೆ

ನಾನು ಲಂಚ ಮುಟ್ಟುವುದಿಲ್ಲ. ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರೂ ಕೂಡ ಲಂಚ ಪಡೆಯದೇ ಕೆಲಸ ಮಾಡಬೇಕು. ಹಣ ಪಡೆದಿದ್ದಾರೆಂಬ ದೂರು ನನಗೆ ಯಾವತ್ತೂ ಬರಬಾರದು ಎಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ಸುಳ್ಯ ಕ್ಷೇತ್ರದ ಶಾಸಕರಾದ ಬಳಿಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಭೆ ನಡೆಸಿಅವರು ಮಾತನಾಡಿದರು.
ನಾನು ಬಡ ಕುಟುಂಬದಿಂದ ಬಂದವಳು. ಜನರ ಕಷ್ಟ ನನಗೆ ಗೊತ್ತಿದೆ. ಸರಕಾರಿ ಇಲಾಖೆಗೆ ಕೆಲಸಕ್ಕೆಂದು ಜನರು ಬಂದಾಗ ಅಧಿಕಾರಿಗಳು ಅವರನ್ನು ಸತಾಯಿಸಬಾರದು. ನಾಳೆ ಬನ್ನಿ, ನಾಡಿದ್ದು ಬನ್ನಿ, ಒಂದುವಾರ ಬಿಟ್ಟು ಬನ್ನಿ ಎಂದು ಹೇಳಬಾರದು. ಅರ್ಜಿಯನ್ನು ಕೊಡುವಾಗಲೇ ಪರಿಶೀಲನೆ ನಡೆಸಬೇಕು. ಯಾವ ದಾಖಲೆ ಇಟ್ಟಿಲ್ಲ ಎಂದು ನೋಡಿಕೊಂಡು ಅದನ್ನು ಅರ್ಜಿ ಕೊಡುವಾಗಲೇ ಅವರಿಗೆ ಮಾಹಿತಿ ನೀಡಬೇಕು. ಮತ್ತು ಆ ಕೆಲಸ ಎಷ್ಟು ದಿನದಲ್ಲಿ ಆಗುತ್ತದೆ ಎಂದು ಅವರಿಗೆ ಸರಿಯಾಗಿ ತಿಳಿಸಬೇಕು. ಮತ್ತು ಆ ದಿನಕ್ಕೆ ಕೆಲಸ ಆಗಬೇಕು ಎಂದು ಮಾಹಿತಿ ನೀಡಿದರು.


ಕೆಲವರು ಪಂಜ, ಕೊಲ್ಲಮೊಗ್ರ, ಬಾಳುಗೋಡು, ಮುರುಳ್ಯ ಹೀಗೆ ದೂರ ದೂರದಿಂದ ಇಲಾಖೆಗಳಿಗೆ ಕೆಲಸ ಮಾಡಿಸಿಕೊಂಡು ಹೋಗಲು ಸುಳ್ಯಕ್ಕೆ ಬರುತ್ತಾರೆ. ಅವರನ್ನು ನಾಳೆ ಬನ್ನಿ ಎಂದು ಹೇಳಿದರೆ ಬಡವರು ಕೂಲಿ ಕೆಲಸಕ್ಕೆ ಹೋಗುವವರ ಜೀವನ ಮತ್ತಷ್ಟು ಕಷ್ಟ ಆಗಬಹುದು. ಅದಕ್ಕೆ ಅವಕಾಶ ನೀಡಬಾರದು. ಸರಕಾರಿ ಇಲಾಖೆಗಳಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಹೇಳುವುದನ್ನು ನಾನು ಕೇಳಿzನೆ. ಆದರೆ ಅದನ್ನು ನೋಡಿಲ್ಲ. ಅಂತ ಮಾತುಗಳು ಕೇಳಿ ಬರಬಾರದು. ಅಧಿಕಾರಿಗಳಿಗೆ ಸಂಬಳ ಸಿಗುತ್ತದೆ. ಅದರಲ್ಲಿ ಸಂತೃಪ್ತ ಜೀವನ ನಡೆಸಬೇಕು. ಲಂಚಕ್ಕಾಗಿ ಕುಣಿಸುತ್ತಾರೆಂಬ ಮಾತು ಎಲ್ಲಿಯೂ ಕೇಳಿ ಬರಬಾರದು. ನಾನು ಲಂಚ ಮುಟ್ಟುವುದಿಲ್ಲ ಅಧಿಕಾರಿಗಳು ಕೂಡಾ ಹಾಗೇ ಇರಬೇಕು ಎಂದು ಅವರು ಸೂಚನೆ ನೀಡಿದರು.


ಕಂದಾಯ ಇಲಾಕೆಯ ಕಂಪ್ಲೈಂಟ್


ನಾನು ಕ್ಷೇತ್ರ ಸುತ್ತಿzನೆ. ಈಗಾಗಲೇ ನನಗೆ ಕಂಪ್ಲೈಂಟ್‌ಗಳು ಬರುತ್ತಿದೆ. ಅದರಲ್ಲಿ ಹೆಚ್ಚಿರುವುದೇ ಕಂದಾಯ ಇಲಾಖೆಯದ್ದು. ಅಕ್ರಮ – ಸಕ್ರಮ ಕಡತ ಆಗಿಲ್ಲ. 94 ಸಿ ಆಗಿಲ್ಲ, 94 ಸಿಸಿ ಆಗಿಲ್ಲ ಹೀಗೆ ಹಲವು ದೂರುಗಳು ಇದೆ. ಯಾಕೆ? ಈರೀತಿಯ ದೂರುಗಳು ಬರುತ್ತದೆ ಎಂದು ಶಾಸಕಿ ಭಾಗೀರಥಿಯವರು ಪ್ರಶ್ನಿಸಿದರು. ನಾನು ಈಗ ಹೇಳಿದ ಎಲ್ಲ ಕೆಲಸಗಳು ಆದಷ್ಟು ಬೇಗ ಆಗಬೇಕು. ಎಷ್ಟು ಅರ್ಜಿಗಳು ಬಾಕಿ ಇದೆ ಯಾಕೆ ಬಾಕಿ ಎಂಬ ವರದಿ ಕೊಡಿ. ಆ ಎಲ್ಲ ಕೆಲಸವನ್ನು ಮಾಡಿ ಸದ್ಯದಲ್ಲೇ ಹಕ್ಕುಪತ್ರ ವಿತರಣೆ ನಡೆಯಬೇಕು ಎಂದು ತಹಶೀಲ್ದಾರರಿಗೆ ಸೂಚನೆ ನೀಡಿದರು.


ರೆಕಾರ್ಡ್ ಮಾಡಿ ಕೊಡಿ


ಕೆಲವು ಗ್ರಾಮಗಳಲ್ಲಿ ಜನರು ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಿದ್ದಾರೆ. ಅವರಿಗೆ ಇನ್ನೂ ಮನೆಯ ಅಡಿಸ್ಥಳ ರೆಕಾರ್ಡ್ ಆಗಿಲ್ಲ. ಅದು ಏನೆಂದು ನೋಡಿಕೊಂಡು ಆ ಸಮಸ್ಯೆ ಪರಿಹರಿಸುವ ಕೆಲಸ ಆಬೇಕು. ಹೇಗೆ ಪರಿಹರಿಸಬಹುದೆಂದು ಅಧಿಕಾರಿಗಳೇ ತಿಳಿಸಬೇಕು. ನಾವು ರಾಜಕೀಯದವರು ನಗೆ ನಮ್ಮ ಫೀಲ್ಡ್ ನಲ್ಲಿ ಅನುಭವ ಇದೆ. ಆದರೆ ನೀವು ಅದೇ ಫೀಲ್ಡ್ ನಲ್ಲಿ ಇರುವುದರಿಂದ ನಿಮಗೆ ಹೆಚ್ಚು ಗೊತ್ತಿದೆ. ಆದ್ದರಿಂದ ಈ ರೀತಿ ಸಮಸ್ಯೆ ಇರುವುದನ್ನು ಪಟ್ಟಿ ಮಾಡಿ ಹಕ್ಕುಪತ್ರ ಕೊಡಿಸುವ ಕೆಲಸ ಆಗಬೇಕೆಂದು ಸೂಚನೆ ನೀಡಿದರು.


ಸಹಕಾರ ನೀಡಿ ಮಾದರಿ ಕ್ಷೇತ್ರವನ್ನಾಗಿಸುವೆ


ಮುಂದಿನ ೫ ವರ್ಷದಲ್ಲಿ ಸುಳ್ಯ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನಗಿದೆ. ಅದಕ್ಕೆ ಅಧಿಕಾರಿಗಳಾದ ನೀವು ಸಹಕಾರ ನೀಡಬೇಕು. ಸಲಹೆ ನೀಡಬೇಕು. ನಿಮ್ಮ ನಿಮ್ಮ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ನನ್ನೊಡನೆ ಸಹಕಾರ ನೀಡಿ. ನನ್ನು ದೊಡ್ಡ ಅಂತರದಲ್ಲಿ ಶಾಸಕಿಯಾಗಿ ಆಯ್ಕೆ ಮಾಡುವಲ್ಲಿ ನಿವು ಮತ ಹಾಕಿರಬಹುದು. ಎಲ್ಲರಿಗೂ ಕೃತಜ್ಞತೆ. ಮುಂದೆಯೂ ಸಹಕಾರ ಬೇಕು ಎಂದು ಹೇಳಿದ ಅವರು ನಾನು ಇಂದು ಸಾಫ್ಟ್ ಆಗಿ ಮಾತನಾಡಿzನೆ. ನಿಷ್ಟುರವಾಗಿ ಮಾತನಾಡುವಂತೆ ನೀವು ಮಾಡಬಾರದು ಎಂದು ಅವರು ಕಿವಿ ಮಾತು ಹೇಳಿದರು.
ತಾ.ಪಂ. ಇ.ಒ. ಭವಾನಿ ಶಂಕರ್ ಸಹಕಾರದ ಭರವಸೆ ನೀಡಿದರು. ತಹಶೀಲ್ದಾರ್ ಜಿ ಮಂಜುನಾಥ್ ಕಂದಾಯ ಇಲಾಖೆಯ ಕೆಲಸ ಕಾರ್ಯದ ಕುರಿತು ವಿವರ ನೀಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.