ಸುಳ್ಯ – ಕಲ್ಲಪಳ್ಳಿ -‌ಪಾಣತ್ತೂರು ರಸ್ತೆಯಲ್ಲಿ ಗುಡ್ಡ ಜರಿತ : ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ

0

ವಾಹನ ಸಂಚಾರ ಸ್ಥಗಿತಕ್ಕೆ ನಿರ್ಧಾರ

ಸುಳ್ಯ – ಕಲ್ಲಪಳ್ಳಿ – ಪಾಣತ್ತೂರು ರಸ್ತೆಯ ಬಾಟೋಳಿ ಎಂಬಲ್ಲಿ ಗುಡ್ಡ ಜರಿತ ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ ಕಲ್ಲಪ್ಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆ ಕಳೆದ ಮೂರು ದಿವಸಗಳ ಹಿಂದೆ ಬಾಟೋಳಿ ಭಾಗದಲ್ಲಿ ಬಾರಿ ಮರ ಸಹಿತ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತ ಆಗಿತ್ತು.
ಸತತ ಮೂರು ದಿವಸಗಳಿಂದ ಪನತ್ತಡಿ ಗ್ರಾಮ ಪಂಚಾಯತ್ ಹಾಗೂ ಕಂದಾಯ ಇಲಾಖೆಯವರು ಪರಿಶ್ರಮದಿಂದ ಮಣ್ಣು ಮರಗಳನ್ನು ತೆರುಗೊಳಿಸಿ ಜು.21 ರಿಂದ ವಾಹನ ಸಂಚಾರ ಪುನರಾರಂಬಿಸಲಾಗಿತ್ತು. ಜು.22 ರಂದು ಮತ್ತೆ ಇದೇ ಜಾಗದಲ್ಲಿ ಗುಡ್ಡಜರಿದು ಗುಡ್ಡದ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಲ್ಲಿಸಲಾಗಿದೆ.

ಸ್ಥಳಕ್ಕೆ ಕಾಸರಗೋಡು ಉಪ ಜಿಲ್ಲಾಧಿಕಾರಿ ದಿಲೀಪ್ ಕೆ , ಕಾಸರಗೋಡು ಭೂ ವಿಜ್ಞಾನಿ ಇಲಾಖೆಯ ಅಮೃತ, ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಸನ್ನ ಪ್ರಸಾದ್, ಪರಪ್ಪ ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಪನತ್ತಡಿ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣಗೌಡ, ವೆಳ್ಳರಿಕುಂಡು ತಹಶೀಲ್ದಾರ್ ಪಿವಿ ಮುರಳಿ, ವಿಲೇಜ್ ಆಫೀಸರ್ ವಿನೋದ್ ಕುಮಾರ್. ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಭೂತಜ್ಞರ ನಿರ್ದೇಶನ ಪ್ರಕಾರ ಗುಡ್ಡದಲ್ಲಿ ಬಿರುಕು ಬಿಟ್ಟಿದ್ದು ಪುನಃ ಗುಡ್ಡ ಕುಸಿಯುವ ಸಾಧ್ಯತೆ ಇದ್ದು ರಾತ್ರಿ ಸಂಪೂರ್ಣ ಪಾದಾಚಾರಿಗಳಿಗೆ ಸಹಿತ ಸಂಚಾರ ನಿಷೇಧಿಸಲು ಉಪ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ.

ಪೊಲೀಸ್ ಬ್ಯಾರಿಕೇಡ್ ಇಟ್ಟು ಸಂಪೂರ್ಣ ರಸ್ತೆ ಮುಚ್ಚಲಾಗಿದೆ. ಮಳೆಯ ಸಾಧ್ಯತೆಗಳನ್ನು ಪರಿಶೀಲಿಸಿ ನಾಳೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಸ್ಥಳವನ್ನು ಯಾಂತ್ರಿಕೃತವಾಗಿ ತೆರವುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು‌ಬಂದಿದೆ.